ಸಾರಾಂಶ
ಅಯೋಧ್ಯೆ: ಜ.22ರಂದು ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಸುಂದರ ಬಾಲರಾಮನ ವಿಗ್ರಹವು ಶ್ರೀ ರಾಮಮಂದಿರ ಟ್ರಸ್ಟ್ ಧರ್ಮದರ್ಶಿಯಾದ ಉಡುಪಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಬುಧವಾರ ಮೊದಲ ಬಾರಿಗೆ ರಾಮಮಂದಿರದ ಆವರಣ ಪ್ರವೇಶಿಸಿದೆ.
ವಿಗ್ರಹ ಕೆತ್ತನೆ ಸ್ಥಳದಲ್ಲಿ ಕ್ರೇನ್ ಮೂಲಕ ವಿಗ್ರಹವನ್ನು ಶೃಂಗರಿಸಲಾದ ಟ್ರಕ್ಗೆ ಸ್ಥಳಾಂತರಿಸಿ ರಾಮಮಂದಿರ ಆವರಣಕ್ಕೆ ತರಲಾಯಿತು. ಬಳಿಕ ಮತ್ತೆ ಕ್ರೇನ್ ಬಳಸಿ ವಿಗ್ರಹವನ್ನು ಟ್ರಕ್ನಿಂದ ಕೆಳಗಿಳಿಸಿ ಮಂತ್ರಘೋಷಗಳ ನಡುವೆ ದೇಗುಲದೊಳಕ್ಕೆ ಕೊಂಡೊಯ್ಯಲಾಯಿತು.
ಈ ವೇಳೆ ವಿಗ್ರಹದ ದರ್ಶನಕ್ಕೆ ಯಾರಿಗೂ ಅವಕಾಶವಿರಲಿಲ್ಲ, ಟರ್ಪಾಲಿನ್ ಹುಡ್ ಇರುವ ಲಾರಿಯಲ್ಲಿ ಮೂರ್ತಿಯನ್ನು ಇರಿಸಿ ಅದರ ಕಣ್ಣಿಗೆ ಬಟ್ಟೆ ಕಟ್ಟಿ ಯಾರೂ ಅದನ್ನು ನೋಡದಂತೆ ಮಂದಿರ ಆವರಣಕ್ಕೆ ಸ್ಥಳಾಂತರಿಸಲಾಯಿತು.
ಗುರುವಾರ ವಿಗ್ರಹವನ್ನು ಗರ್ಭಗುಡಿಯಲ್ಲಿ ಕೂರಿಸಲಾಗುವುದು. ಜ.22ರಂದೇ ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿ ಸಾರ್ವಜನಿಕ ದರ್ಶನ ಮಾಡಿಸಲಾಗುವುದು ಎಂದು ಮೂಲಗಳು ಹೇಳಿವೆ.
ಜ.22ರಂದು ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠಾಪನೆಯ ಪೂಜಾವಿಧಿಗಳ ಮೂಲಕ ವಿಗ್ರಹಕ್ಕೆ ದೇವರ ಸ್ವರೂಪ ನೀಡಲಾಗುವುದು.
ಪೂಜಾವಿಧಿ:ವಿಗ್ರಹ ಪರಿಸರ ಪ್ರವೇಶಕ್ಕೂ ಮುನ್ನ ಬುಧವಾರ ಸರಯೂ ನದಿ ತೀರದಲ್ಲಿ ಕಳಸ ಪೂಜೆ ನಡೆಸಲಾಯಿತು. ಅಲ್ಲಿ ಕಳಸದಲ್ಲಿ ಪವಿತ್ರ ಸರಯೂ ನದಿಯ ನೀರನ್ನು ತುಂಬಿಕೊಂಡು ದೇಗುಲಕ್ಕೆ ಬರಲಾಯಿತು.
ಬಳಿಕ ವಿವಿಧ ಅರ್ಚಕರ ತಂಡ ಜಲಯಾತ್ರೆ, ತೀರ್ಥ ಪೂಜನಾ, ಬ್ರಾಹ್ಮಣ ಬತೂಕ್, ಕುಮಾರಿ- ಸುವಾಸಿನಿ ಪೂಜೆ, ವರ್ಧಿನಿ ಪೂಜೆ, ಕಳಸ ಪೂಜೆಗಳನ್ನು ನಡೆಸಿತು. ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಿ ಗರ್ಭಗುಡಿಯಲ್ಲಿ ರಾಮನನ್ನು ಇಡುವ ಪೀಠಕ್ಕೆ ಮಂಗಳಾರತಿ ಮಾಡಲಾಯಿತು.
ನಂತರ ಸಂಜೆ ಗರ್ಭಗುಡಿಯಲ್ಲಿ ವಿಗ್ರಹ ಇರಿಸುವ ವಿಗ್ರಹವನ್ನು ದೇಗುಲದ ಆವರಣಕ್ಕೆ ತರಲಾಯಿತು,ಜೊತೆಗೆ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಸದಸ್ಯರು ಮತ್ತು ನಿರ್ಮೋಹಿ ಅಖಾಡದ ಮಹಾಂತ ದೀನೇಂದ್ರ ದಾಸ್, ಅರ್ಚಕರಾದ ಸುನೀಲ್ ದಾಸ್ ದೇಗುಲದ ಗರ್ಭಗೃಹದಲ್ಲಿ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿದರು.
ಇಂದು ಏನೇನು ಪೂಜೆ?
ಗುರುವಾರದಿಂದ ಪವಿತ್ರೀಕರಣದ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ಶುಭ ದಿನದಂದು ಮಂಟಪ ಪ್ರವೇಶ ಪೂಜೆ ವಾಸ್ತು ಪೂಜೆ ಮತ್ತು ವರುಣನ ಪೂಜೆ ನಡೆಯಲಿದೆ. ಬಳಿಕ ವಿಗ್ರಹವನ್ನು ಗರ್ಭಗುಡಿಯಲ್ಲಿ ಕೂರಿಸಲಾಗುತ್ತದೆ.