ಹಸೀನಾಗೆ ಗಲ್ಲು?: ಇಂದು ತೀರ್ಪು

| Published : Nov 17 2025, 12:45 AM IST

ಸಾರಾಂಶ

ಭಾರತದ ರಾಜಾಶ್ರಯದಲ್ಲಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಹಾಗೂ ಅವರ ಆಪ್ತರ ವಿರುದ್ಧ ಹೂಡಲಾಗಿದ್ದ ನರಮೇಧ ಸೇರಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ನ.17ರಂದು ಬಾಂಗ್ಲಾ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ತೀರ್ಪು ಪ್ರಕಟಿಸಲಿದೆ.

- ಇಂದು ಬಾಂಗ್ಲಾ ಮಾಜಿ ಪ್ರಧಾನಿ ಮೇಲಿನ ನರಮೇಧ ಕೇಸಿನ ತೀರ್ಪು

- ಸಾವಿರಾರು ಜನರ ಸಾವಿಗೆ ಕಾರಣ ಆರೋಪ । ನೇಣು ಕೋರಿರುವ ಸರ್ಕಾರ ಪಿಟಿಐ ಢಾಕಾ

ಭಾರತದ ರಾಜಾಶ್ರಯದಲ್ಲಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಹಾಗೂ ಅವರ ಆಪ್ತರ ವಿರುದ್ಧ ಹೂಡಲಾಗಿದ್ದ ನರಮೇಧ ಸೇರಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ನ.17ರಂದು ಬಾಂಗ್ಲಾ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ತೀರ್ಪು ಪ್ರಕಟಿಸಲಿದೆ.

‘ಹಸೀನಾ ಹಾಗೂ ಆಪ್ತರು ಸಾವಿರಾರು ಜನರ ಸಾವಿಗೆ ಕಾರಣರಾಗಿರುವುದರಿಂದ ಮರಣ ದಂಡನೆಯನ್ನೇ ವಿಧಿಸಬೇಕು’ ಎಂದು ಸರ್ಕಾರದ ವಕೀಲರು ವಾದ ಮಂಡಿಸಿದ್ದಾರೆ. ಇದಕ್ಕೆ ಕೋರ್ಟ್‌ ಸಮ್ಮತಿಸಿ ಗಲ್ಲು ಶಿಕ್ಷೆ ನೀಡಲಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ.

ಹಸೀನಾ, ಮಾಜಿ ಗೃಹಸಚಿವ ಅಸಾದುಜ್ಜಾಮಾನ್‌ ಖಾನ್‌ ಕಮಲ್‌ ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್‌ ಮುಮುನ್‌ ಅವರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಐಸಿಟಿ-ಬಿಡಿ ಅ.23ರಂದು ಪೂರ್ಣಗೊಳಿಸಿತ್ತು.

ಹಸೀನಾ ಮೇಲಿನ ಆರೋಪವೇನು?:

ತಮ್ಮ ಸರ್ಕಾರದ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಆದೇಶಿಸಿ ಸಾವಿರಾರು ಜನರ ಸಾವಿಗೆ ಕಾರಣವಾದ ಆರೋಪವನ್ನು ಹಸೀನಾ ಹೊತ್ತಿದ್ದಾರೆ. ಆದರೆ ದಂಗೆಯನ್ನು ತಡೆಯಲು ಆಗದೇ 2024ರ ಆ.5ರಂದು ಹಸೀನಾ ದೇಶ ಬಿಟ್ಟು ಓಡಿ ಹೋಗಿ, ಭಾರತದ ರಾಜಧಾನಿ ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ.

ಭಾರಿ ಭದ್ರತೆ:ತೀರ್ಪು ಪ್ರಕಟಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ದೇಶಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.