ಸಾರಾಂಶ
ಕೋಲ್ಕತಾ: ಇಲ್ಲಿನ ಅರ್ಜೆ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಹತ್ಯೆ ಪ್ರಕರಣ ದೇಶವಿರೋಧಿ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂಥ ಕಾನೂನು ಜಾರಿ ಮಾಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ವೈದ್ಯೆ ಹತ್ಯೆ ಪ್ರಕರಣದಲ್ಲಿ ತಮ್ಮ ರಾಜೀನಾಮೆಗೆ ಭಾರೀ ಆಗ್ರಹ ಕೇಳಿಬರುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಮತಾ, ‘ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸಲು ಇರುವ ನಿಯಮಗಳಿಗೆ ತಿದ್ದುಪಡಿ ತಂದು ಅದನ್ನು ಮುಂದಿನ ವಾರವೇ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಲಿದ್ದೇವೆ. ಬಳಿಕ ಅದನ್ನು ರಾಜ್ಯಪಾಲರಿಗೆ ಕಳುಹಿಸಲಿದ್ದೇವೆ. ಒಂದು ವೇಳೆ ಅವರು ತಕ್ಷಣವೇ ಅನುಮತಿ ನೀಡಲು ನಿರಾಕರಿಸಿದಲ್ಲಿ ರಾಜಭವನದ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ. ಜೊತೆಗೆ ಇಂಥದ್ದೇ ಕಾಯ್ದೆ ರೂಪಿಸುವಂತೆ ಕೇಂದ್ರಕ್ಕೂ ಒತ್ತಡ ಹೇರಲಿದ್ದೇವೆ’ ಎಂದು ಹೇಳಿದರು.
ಬಂಗಾಳ ಉರಿದರೆ, ದೆಹಲಿಯೂ ಹೊತ್ತಿ ಉರಿಯಲಿದೆ: ಮಮತಾ
ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಪಕ್ಷದವರು ಬಂಗಾಳದಲ್ಲಿ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಒಂದು ವೇಳೆ ಬಂಗಾಳ ಹೊತ್ತಿ ಉರಿದರೆ, ಅಸ್ಸಾಂ, ಬಿಹಾರ, ಈಶಾನ್ಯ ರಾಜ್ಯಗಳು, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ದೆಹಲಿ ಸಹ ಹೊತ್ತಿ ಉರಿಯಲಿದೆ. ನಾವು ನಿಮ್ಮ ಕುರ್ಚಿಯನ್ನು ಉರುಳಿಸುತ್ತೇವೆ.- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ