ಸಾರಾಂಶ
ಇತ್ತೀಚೆಗಷ್ಟೇ ಆರ್ಜೆಡಿ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಪಟನಾ: ಇತ್ತೀಚೆಗಷ್ಟೇ ಆರ್ಜೆಡಿ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ದಾಖಲೆಯ ಒಂಭತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ನಿತೀಶ್ಗಿದು ಸುಲಭದ ಅಗ್ನಿಪರೀಕ್ಷೆಯಾಗಲಿದೆ.
ಬಿಜೆಪಿವಿರೋಧಿ ಇಂಡಿಯಾ ಮೈತ್ರಿಕೂಟಕ್ಕೆ ಕೈಕೊಟ್ಟು ಎನ್ಡಿಎ ಪಾಳೆಯ ಸೇರಿರುವ ಜೆಡಿಯು ನಾಯಕ ನಿತೀಶ್ ಕುಮಾರ್ಗೆ 128 ಶಾಸಕರ ಬೆಂಬಲವಿದೆ.
ಅದರಲ್ಲಿ ಬಿಜೆಪಿ 78, ಜೆಡಿಯು 45, ಎಚ್ಎಎಂ 4 ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿಯಿದ್ದಾರೆ. ವಿಪಕ್ಷಗಳ ಬಳಿ 114 ಶಾಸಕರಿದ್ದಾರೆ.
ಬಹುಮತ ಸಾಬೀತುಪಡಿಸಲು 122 ಶಾಸಕರು ಬೇಕು.ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ಜೆಡಿಯು ತನ್ನ ಶಾಸಕರಿಗೆ ವಿಪ್ ನೀಡಿದ್ದು, ಸೋಮವಾರ ಎಲ್ಲರೂ ವಿಧಾನಸಭೆಯಲ್ಲಿ ಹಾಜರಿರಲು ಸೂಚಿಸಿದೆ.
ಆದರೆ, ಈಗಲೂ ವಿಧಾನಸಭೆಯಲ್ಲಿ ಆರ್ಜೆಡಿಯ ಸ್ಪೀಕರ್ ಇದ್ದಾರೆ. ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ.
ಆದರೆ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಜೆಡಿಯು ಸಡ್ಡು ಹೊಡೆದಿದ್ದು, ಸ್ಪೀಕರ್ಗೆ ಸದನ ನಡೆಸಲು ಬಿಡುವುದಿಲ್ಲ ಎಂದು ಹೇಳಿದೆ.
ಹೀಗಾಗಿ ಸದನದಲ್ಲಿ ಹೈಡ್ರಾಮಾ ನಿರೀಕ್ಷಿಸಲಾಗಿದೆ.ವಿಶ್ವಾಸಮತ ಯಾಚನೆಗೂ ಮುನ್ನ ತಮ್ಮ ಪಕ್ಷದ ಶಾಸಕರನ್ನು ಎನ್ಡಿಎ ಮೈತ್ರಿಕೂಟವು ಸೆಳೆಯುವ ಭೀತಿಯಿಂದ ಆರ್ಜೆಡಿಯ ಎಲ್ಲಾ ಶಾಸಕರನ್ನೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮನೆಯಲ್ಲಿ ಇರಿಸಲಾಗಿದೆ.
ಕಾಂಗ್ರೆಸ್ ಶಾಸಕರೂ ತೇಜಸ್ವಿ ಮನೆಗೇ ಬಂದಿದ್ದಾರೆ. ಬಿಜೆಪಿ ಶಾಸಕರು ಕೂಡ ಬೋಧಗಯಾದಲ್ಲಿ ಒಟ್ಟಿಗೇ ಇದ್ದಾರೆ.