ಸಾರಾಂಶ
ಭಾಗಲ್ಪುರ (ಬಿಹಾರ): ಮಹಾಕುಂಭಮೇಳವನ್ನು ಅರ್ಥಹೀನ (ಫಾಲ್ತು) ಎಂದು ಕರೆದಿದ್ದ ಆರ್ಜೆಡಿ ನಾಯಕ ಲಾಲು ಪ್ರಸಾದ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಿದ ಜಂಗಲ್ ರಾಜ್ ನಾಯಕರನ್ನು ಬಿಹಾರದ ಜನರು ಎಂದೂ ಕ್ಷಮಿಸರು’ ಎಂದಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ, ‘ಜಂಗಲ್ ರಾಜ್ಯದ ಕುಂಭಮೇಳ ಹಾಗ ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಿದರು. ಆ ವ್ಯಕ್ತಿ ಪ್ರಾಣಿಗಳಿಗೆ ಮೀಸಲಿರಿಸಿದ್ದ ಮೇವನ್ನು ತಿಂದರು. ಇವರು ದೇಶದ ಒಳಿತನ್ನು ಹಾಗೂ ರೈತರ ಒಳಿತನ್ನು ಯಾವತ್ತೂ ಬಯಸಲ್ಲ. ಅಂಥವರನ್ನು ಜನತೆ ಕ್ಷಮಿಸುವುದಿಲ್ಲ’ ಎಂದರು.ಆದರೆ, ‘ರೈತರ ಕಲ್ಯಾಣ ಮತ್ತು ಬಿಹಾರದ ಅಭಿವೃದ್ಧಿಗೆ ಎನ್ಡಿಎ ಸರ್ಕಾರದ ಬದ್ಧವಾಗಿದೆ. ರೈತರು ಸಬ್ಸಿಡಿ ದರದಲ್ಲಿ ಯೂರಿಯಾ ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ. ನಮ್ಮ ಸರ್ಕಾರವಿರದಿದ್ದರೆ ಕೃಷಿಕರಿಗೆ ಇಂತಹ ಸೌಲಭ್ಯಗಳು ಲಭಿಸುತ್ತಲೇ ಇರಲಿಲ್ಲ’ ಎಂದರು.
ಡೈರಿ ಕ್ಷೇತ್ರ ಬಲವರ್ಧನೆಗೊಳಿಸಲು ಸರ್ಕಾರ ವಹಿಸಿದ ಶ್ರಮದಿಂದ ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದ ಮೋದಿ, ಬಿಹಾರ ರೈತರಿಗೆ ಅನುಕೂಲವಾಗುವಂತೆ ಮಖಾನಾ ಮಂಡಳಿ ಸ್ಥಾಪಿಸುವ ಭರವಸೆ ನೀಡಿದರು. ಜೊತೆಗೆ, ರಾಜ್ಯದಲ್ಲಿ ಸಂಪರ್ಕ ಸಾಧನೆಯನ್ನು ಹೆಚ್ಚಿಸಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 4 ಸೇತುವೆಗಳ ನಿರ್ಮಾಣಕ್ಕೆ ಕೇಂದ್ರದಿಂದ 1,100 ಕೋಟಿ ರು. ನೀಡುವುದಾಗಿ ಘೋಷಿಸಿದರು.
ಮುಸ್ಲಿಮರಿಗೆ ಕುಂಭ ಹೊಣೆ: ಅಖಿಲೇಶ್ಗೆ ಯೋಗಿ ಚಾಟಿ : ಟೀಕಾಕಾರರನ್ನು ಹಂದಿ, ಹದ್ದುಗಳಿಗೆ ಹೋಲಿಸಿದ ಸಿಎಂ
ಲಖನೌ: ‘2013ರಲ್ಲಿ ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗ ಕುಂಭಮೇಳದ ಸಿದ್ಧತೆಗೆ ಸಮಯವನ್ನೇ ಮೀಸಲಿಡಲಿಲ್ಲ. ಇದರ ಬದಲು ಉಸ್ತುವಾರಿಯನ್ನು ‘ಸನಾತನೇತರ’ ಸಚಿವ ಮೊಹಮ್ಮದ್ ಅಜಂ ಖಾನ್ ಅವರಿಗೆ ನೀಡಿದ್ದರು’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ.
ವಿಧಾನಸಭೆಯಲ್ಲಿ ವಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ‘ನಾವು ನಿಮ್ಮ ರೀತಿ ನಂಬಿಕೆಗಳ ಜೊತೆಗೆ ಆಟವಾಡಲಿಲ್ಲ. ನಿಮ್ಮ ಸಮಯದಲ್ಲಿ ಸಿಎಂ ಅವರು ಕಾರ್ಯಕ್ರಮದ ಬಗ್ಗೆ ಪರಿಶೀಲಿಸುವುದಕ್ಕೆ ಸಮಯವಿರದೇ ಸನಾತನ ಧರ್ಮಕ್ಕೆ ಸೇರಿರದ ವ್ಯಕ್ತಿಗೆ ಕುಂಭಮೇಳದ ಜವಾಬ್ದಾರಿಯನ್ನು ನೀಡಿದ್ದರು. 2013ರಲ್ಲಿ ಕುಂಭಕ್ಕೆ ಹೋದವರು ಭ್ರಷ್ಟಾಚಾರ, ಮಾಲಿನ್ಯ ಕಂಡಿದ್ದು ಇದೇ ಕಾರಣಕ್ಕೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಯೋಗ್ಯವಾದ ನೀರಿರಲಿಲ್ಲ. ಸ್ನಾನ ಮಾಡಲು ನಿರಾಕರಿಸಿದ ಮಾರಿಷನ್ ಪ್ರಧಾನಿಯೇ ಇದಕ್ಕೆ ಉದಾಹರಣೆ’ ಎಂದು ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದರು.
ಹದ್ದು, ಹಂದಿಗೆ ಹೋಲಿಕೆ:‘ರಣಹದ್ದುಗಳು ಮೃತ ದೇಹಗಳನ್ನು ಪಡೆದವು. ಹಂದಿಗಳು ಕೊಳಕನ್ನು ಪಡೆದವು... ಆದರೆ ಸೂಕ್ಷ್ಮ ಜನರು ಸಂಬಂಧಗಳ ಸುಂದರ ಚಿತ್ರಣವನ್ನು ಪಡೆದರು, ವ್ಯಾಪಾರಿಗಳು ವ್ಯಾಪಾರವನ್ನು ಪಡೆದರು, ಭಕ್ತರು ಸ್ವಚ್ಛವಾದ ವ್ಯವಸ್ಥೆಗಳನ್ನು ಪಡೆದರು’ ಎಂದು ಟೀಕಾಕಾರರ ಹೆಸರೆತ್ತದೇ ಯೋಗಿ ಕುಟುಕಿದರು.
ದಯವಿಟ್ಟು ಕುಂಭಕ್ಕೆ ಬರೋದು ನಿಲ್ಲಿಸಿ: ಪ್ರಯಾಗ್ ನಿವಾಸಿ ಮನವಿ
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯದ ಹಂತ ತಲುಪಿದ್ದರೂ ಜನಸಂದಣಿ ಮಿತಿ ಮೀರುತ್ತಿದೆ ಎಂದಿರುವ ಸ್ಥಳೀಯರೊಬ್ಬರು ನಗರಕ್ಕೆ ಬರುವುದನ್ನು ನಿಲ್ಲಿಸಿ ಎಂದು ದೇಶದ ಜನತೆಗೆ ಮನವಿ ಮಾಡಿದ್ದಾರೆ.ರೆಡ್ಡಿಟ್ ಜಾಲತಾಣದಲ್ಲಿ ಮನವಿ ಮಾಡಿರುವ ಅವರು, ‘ಪ್ರಯಾಗ್ರಾಜ್ ಮುರಿಯುವ ಹಂತ ತಲುಪಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯರು ತಮ್ಮ ದೈನಂದಿನ ಜೀವನವನ್ನು ನಡೆಸುವುದು ಕಷ್ಟಕರವಾಗಿದೆ. ಕುಂಭಮೇಳದ ಆರಂಭದಲ್ಲಿದ್ದ ರೋಮಾಂಚನವು ಈಗ ಆಯಾಸವಾಗಿ ಬದಲಾಗಿದೆ. ದಯವಿಟ್ಟು ಕುಂಭಮೇಳಕ್ಕೆ ಬರುವುದನ್ನು ನಿಲ್ಲಿಸಿ’ ಎಂದು ಬರೆದುಕೊಂಡಿದ್ದಾರೆ.