ಸಾರಾಂಶ
ಬೆಹ್ರಾಂಪುರ (ಒಡಿಶಾ): ತಮ್ಮನ್ನು ತಾವು ಪುರಿ ಒಡೆಯ ಜಗನ್ನಾಥನ ಪುತ್ರ ಎಂದು ಕರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜೂ.4ಕ್ಕೆ ಹಾಲಿ ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜು ಜನತಾದಳ ಪಕ್ಷ (ಬಿಜೆಡಿ) ಆಡಳಿತ ಮುಕ್ತಾಯಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಡಿ-ಬಿಜೆಪಿ ಪರಸ್ಪರ ವಿರುದ್ಧ ಸಣೆಸುತ್ತಿದ್ದರೂ ಪಕ್ಷಗಳ ನಂಟು ಉತ್ತಮವಾಗಿತ್ತು. ಹೀಗಾಗಿ ಮೋದಿ ಅವರ ಈ ಟೀಕೆ ಹುಬ್ಬೇರಿಸುವಂತೆ ಮಾಡಿದೆ.
ಸೋಮವಾರ ಬೆಹ್ರಾಂಪುರ ಮತ್ತು ನಬರಂಗ್ಪುರದಲ್ಲಿ ಲೋಕಸಭೆ ಹಾಗೂ ಒಡಿಶಾ ವಿಧಾನಸಭೆ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಳೆದ 50 ವರ್ಷಗಳಲ್ಲಿ 25 ವರ್ಷ ಕಾಂಗ್ರೆಸ್ಗೆ, 25 ವರ್ಷ ಬಿಜೆಡಿಗೆ ನೀಡಿದ್ದೀರಿ. ಅವು ರಾಜ್ಯವನ್ನು ಲೂಟಿ ಮಾಡಿವೆ. ಇದೀಗ 5 ವರ್ಷ ಬಿಜೆಪಿಗೆ ನೀಡಿ. ನಮ್ಮ ಡಬಲ್ ಎಂಜಿನ್ ಸರ್ಕಾರ, ಒಡಿಶಾವನ್ನು ದೇಶದಲ್ಲೇ ನಂ.1 ಮಾಡಲಿದೆ’ ಎಂದು ಭರವಸೆ ನೀಡಿದರು.
ಇದೇ ವೇಳೆ ಒಡಿಯಾ ಭಾಷೆ ಮತ್ತು ಸಂಸ್ಕೃತಿ ಗೊತ್ತಿದ್ದವರೇ ಸಿಎಂ ಆಗಬೇಕು ಎಂದು ವಿದೇಶದಲ್ಲಿ ಕಲಿತಿರುವಹಾಲಿ ಸಿಎಂ ನವೀನ್ ಪಟ್ನಾಯಕ್ಗೆ ಟಾಂಗ್ ನೀಡಿದ ಮೋದಿ, ‘ಕೇಂದ್ರದ ಹಲವು ಯೋಜನೆ ಜಾರಿಗೆ ರಾಜ್ಯ ಸರ್ಕಾರ ಅವಕಾಶ ನೀಡುತ್ತಿಲ್ಲ. ಒಡಿಶಾದ ಜನರು ಸಾಮರ್ಥ್ಯ ಮತ್ತು ಆಸಕ್ತಿ ಹೊಂದಿದ್ದರೂ ಬಿಜೆಡಿ ಸರ್ಕಾರ ಅವರಿಗೆ ಯಾವುದೇ ಅವಕಾಶ ನೀಡಿಲ್ಲ’ ಎಂದು ಆರೋಪಿಸಿದರು.