- ಸ್ಥಳೀಯರ ಭೂಮಿ ನುಸುಳುಕೋರರಿಗೆ ಕೊಟ್ಟಿದ್ದು ಕಾಂಗ್ರೆಸ್‌: ಆರೋಪ

ಗುವಾಹಟಿ: ಕಾಂಗ್ರೆಸ್‌ನಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ. ಸ್ಥಳೀಯ ಜನರ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರ ಮಾಡಿದ್ದೇ ಕಾಂಗ್ರೆಸ್‌ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.

ಅಸ್ಸಾಂನ ಕೋಕರಾಝಾರ್‌ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಮಳೆಯ ಕಾರಣ ಪ್ರಯಾಣಕ್ಕೆ ತೊಂದರೆಯಾಗಿ ಗುವಾಹಟಿಯಿಂದಲೇ ವರ್ಚುವಲ್‌ ಮೂಲಕ ಅವರು ಮಾತನಾಡಿದರು.‘ಸ್ಥಳೀಯ ಜನರ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸುವ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡಿದೆ.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಶಿಕ್ಷಿಸಿ. ಈ ದೇಶದಲ್ಲಿ ನುಸುಳುಕೋರರಿಗೆ ಸ್ಥಾನವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿ’ ಎಂದು ಕರೆ ನೀಡಿದರು. ‘ಡಬಲ್-ಎಂಜಿನ್ ಸರ್ಕಾರದ ಅಡಿಯಲ್ಲಿ ರಾಜ್ಯ ಶಾಂತಿ ಮತ್ತು ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಬಿಜೆಪಿ ದೀರ್ಘಕಾಲೀನ ಶಾಂತಿಯನ್ನು ಸ್ಥಾಪಿಸಿದರೆ, ಕಾಂಗ್ರೆಸ್ ಸ್ವಾರ್ಥ ಹಿತಾಸಕ್ತಿಗಳಿಗಾಗಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿತು’ ಎಂದು ಕಿಡಿ ಕಾರಿದರು.

==


ಸಿಇಸಿ ಪದಚ್ಯುತಿ ನೋಟಿಸ್‌ ಉಭಯ ಸದನಕ್ಕೆ ಸಲ್ಲಿಕೆ

ಪಿಟಿಐ ನವದೆಹಲಿಮತದಾರರ ಪಟ್ಟಿ ಪರಿಷ್ಕರಿಸಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಪದಚ್ಯುತಿ ಪ್ರಸ್ತಾವನೆಯ ನೋಟಿಸ್‌ ಅನ್ನು ವಿರೋಧ ಪಕ್ಷದ ಸಂಸದರು ಸಂಸತ್ತಿನ ಎರಡೂ ಸದನಗಳಲ್ಲಿ ಸಲ್ಲಿಸಿದ್ದಾರೆ.

ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು ಮತ್ತು 63 ರಾಜ್ಯಸಭಾ ಸದಸ್ಯರು ಸಹಿ ಹಾಕಿದ್ದಾರೆ. ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗಿಲ್ಲದಿದ್ದರೂ, ಆಮ್ ಆದ್ಮಿ ಪಕ್ಷವು ಸಹ ಈ ಕ್ರಮವನ್ನು ಬೆಂಬಲಿಸಿದೆ ಎಂದು ಮೂಲಗಳು ತಿಳಿಸಿವೆ.ಕೆಲವು ಸ್ವತಂತ್ರ ಸಂಸದರು ಸಹ ನೋಟಿಸ್‌ಗೆ ಸಹಿ ಹಾಕಿದ್ದಾರೆ ಮತ್ತು ಇನ್ನೂ ಹಲವರು ಈ ಉಪಕ್ರಮಕ್ಕೆ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಅವು ತಿಳಿಸಿವೆ.

ಸಿಇಸಿಯನ್ನು ಪದಚ್ಯುತಗೊಳಿಸುವಂತೆ ಕೋರಿ ನೋಟಿಸ್ ಜಾರಿಯಾಗುತ್ತಿರುವುದು ಇದೇ ಮೊದಲು. ಮೂಲಗಳ ಪ್ರಕಾರ, ಕುಮಾರ್ ವಿರುದ್ಧ ಏಳು ಆರೋಪಗಳನ್ನು ನೋಟಿಸ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದರಲ್ಲಿ ಪಕ್ಷಪಾತ, ಚುನಾವಣಾ ಅಕ್ರಮದ ತನಿಖೆಗೆ ಅಡ್ಡು, ಬಿಜೆಪಿಗೆ ಸಹಾಯ- ಪ್ರಮುಖವಾಗಿವೆ.