ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ ಮುಂಚೂಣಿಯಲ್ಲಿದ್ದು, ಚೊಚ್ಚಲ ಬಾರಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಪಕ್ಷ ಕಟ್ಟುವ, ಬೆಳೆಸುವ ನಾಯಕರಿಗಾಗಿ ಹುಡುಕಾಟ ನಡೆಸಿದೆ.
ಭುವನೇಶ್ವರ: ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಹಿಡಿಯುವ ಅವಕಾಶ ಪಡೆದಿರುವ ಬಿಜೆಪಿಯಲ್ಲಿ ಇದೀಗ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಬಲವಾಗಿ ನಡೆದಿದೆ.2 ದಶಕಗಳಿಗಿಂತಲೂ ಹೆಚ್ಚಿನ ಅವಧಿ ಏಕಾಂಗಿಯಾಗಿ ಅಧಿಕಾರ ಚಲಾಯಿಸಿದ ಬಿಜು ಜನತಾ ದಳ (ಬಿಜೆಡಿ)ಯನ್ನು ಅಧಿಕಾರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಇದೀಗ ರಾಜ್ಯದಲ್ಲಿ ಪಕ್ಷವನ್ನು ಬಲವಾಗಿ ಬೇರುಬಿಡಲು ನೆರವಾಗಬಲ್ಲ ಮುಖ್ಯಮಂತ್ರಿಗಾಗಿ ಕಸರತ್ತು ಆರಂಭಿಸಿದೆ.ಮೂಲಗಳ ಪ್ರಕಾರ, ಕೇಂದ್ರ ಮಾಜಿ ಸಚಿವ ಜುರಾಲ್ ಓರಂ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ‘ಜೈ’ ಪಾಂಡಾ, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರ ಅವರ ಹೆಸರನ್ನು ಸಿಎಂ ಹುದ್ದೆಗೆ ಪ್ರಮುಖವಾಗಿ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಒಡಿಶಾದ 147 ವಿಧಾನಸಭಾ ಸ್ಥಾನದಲ್ಲಿ ಬಿಜೆಪಿ 78 ಮತ್ತು ಬಿಜೆಡಿ 51, ಕಾಂಗ್ರೆಸ್ 14, ಪಕ್ಷೇತರರು 3, ಸಿಪಿಎಂ 1 ಸ್ಥಾನ ಗೆದ್ದಿವೆ. ಆದರೆ ಓರಂ, ಪಾಂಡ, ಪಾತ್ರ ಹಾಗೂ ಪ್ರಧಾನ್ ಈಗಾಗಲೇ ಲೋಕಸಭೆಗೆ ಆಯ್ಕೆಯಾಗಿದ್ದಾರೆ.