ಸಾರಾಂಶ
ನವದೆಹಲಿ: ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ಸ್ಪೀಕರ್ ಹುದ್ದೆಯನ್ನು ತನ್ನಲ್ಲಿ ಉಳಿಸಿಕೊಂಡು, ಉಪಸ್ಪೀಕರ್ ಹುದ್ದೆಯನ್ನು ಮಿತ್ರಪಕ್ಷಗಳಾದ ಟಿಡಿಪಿ ಅಥವಾ ಜೆಡಿಯುಗೆ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದೆ ಎಂದು ಮೂಲಗಳು ಹೇಳಿವೆ. ಜೂ.26ಕ್ಕೆ ಆಯ್ಕೆ ನಡೆವ ನಿರೀಕ್ಷೆ ಇದೆ.
ಟಿಡಿಪಿ ಮತ್ತು ಜೆಡಿಯು ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಬಿಜೆಪಿಗೆ, ಸ್ಪೀಕರ್ ಹುದ್ದೆ ಅತ್ಯಂತ ಮಹತ್ವದ್ದು ಎಂಬ ಅರಿವಿದೆ. ಹೀಗಾಗಿ ಆ ಹುದ್ದೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ ಇರುವ ನಿರ್ಧಾರಕ್ಕೆ ಬಂದಿದೆ. ಇನ್ನು ಉಪಸ್ಪೀಕರ್ ಹುದ್ದೆ ಮಿತ್ರರಿಗೆ ಬಿಡಲು ಪಕ್ಷ ಸಿದ್ಧವಿದ್ದು, ಈ ಕುರಿತು ಮಿತ್ರ ಜೊತೆ ಮಾತುಕತೆ ನಡೆಸುವ ಹೊಣೆಯನ್ನು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ವಹಿಸಿದೆ.
ಮೂಲಗಳ ಪ್ರಕಾರ ಬಿಜೆಪಿಯ ಡಿ.ಪುರಂದೇಶ್ವರಿ, ಭ್ರಾತೃಹರಿ ಮಹ್ತಬ್ ಹಾಗೂ ಹಾಲಿ ಸ್ಪೀಕರ್ ಓಂ ಬಿರ್ಲಾ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿಬರುತ್ತಿದೆ ಮತ್ತು ಜೂ.26ಕ್ಕೆ ಘೋಷಣೆ ಆಗುವ ಸಾಧ್ಯತೆ ಇದೆ.
ಈ ನಡುವೆ ಎನ್ಡಿಎ ಮೈತ್ರಿಕೂಟ ಸ್ಪೀಕರ್ ಹುದ್ದೆಗೆ ಸರ್ವಸಮ್ಮತಿಯ ಅಭ್ಯರ್ಥಿ ಕಣಕ್ಕೆ ಇಳಿಸಬೇಕೆಂದು ಟಿಡಿಪಿ ಹೇಳಿದ್ದರೆ, ಬಿಜೆಪಿ ನಿರ್ಧಾರ ಬೆಂಬಲಿಸುವುದಾಗಿ ಜೆಡಿಯು ಹೇಳಿದೆ. ಈ ಮುಂಚೆ ಸ್ಪೀಕರ್ ಹುದ್ದೆ ತನಗೆ ಬೇಕು ಎಂದು ಟಿಡಿಪಿ ಷರತ್ತು ವಿಧಿಸಿದೆ ಎಂದು ವರದಿಯಾಗಿತ್ತು.
ಈ ನಡುವೆ ಇಂಡಿಯಾ ಮೈತ್ರಿಕೂಟ ಕೂಡಾ ಉಪಸ್ಪೀಕರ್ ಹುದ್ದೆಯನ್ನು ತನಗೆ ನೀಡಬೇಕು. ಇಲ್ಲದೇ ಹೋದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಸುಳಿವು ನೀಡಿರುವುದು ಕುತೂಹಲ ಮೂಡಿಸಿದೆ.