ವಿಧಾನಸಭಾ ಚುನಾವಣೆ : ದಿಲ್ಲಿ ಬಿಜೆಪಿಯಿಂದಲೂ ಪ್ರಣಾಳಿಕೆಯಲ್ಲಿ ‘ಉಚಿತ ಭರವಸೆ ಮಳೆ’

| Published : Jan 18 2025, 12:47 AM IST / Updated: Jan 18 2025, 04:36 AM IST

ಸಾರಾಂಶ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಆಪ್ ಭರಪೂರ ‘ಉಚಿತ ಭರವಸೆ’ಗಳನ್ನು ಘೋಷಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಹಲವು ಅಂಥದ್ದೇ ಭರವಸೆ ಪ್ರಕಟಿಸಿದೆ.

 ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಆಪ್ ಭರಪೂರ ‘ಉಚಿತ ಭರವಸೆ’ಗಳನ್ನು ಘೋಷಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಹಲವು ಅಂಥದ್ದೇ ಭರವಸೆ ಪ್ರಕಟಿಸಿದೆ.

 ದೆಹಲಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 2500 ರು., 500 ರು. ಗೆ ಎಲ್ಪಿಜಿ ಹಾಗೂ ಹಿರಿಯರಿಗೆ 2500 ಮಾಸಿಕ ಪಿಂಚಣಿ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಪಕ್ಷ ಘೋಷಿಸಿದೆ.ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪತ್ರಿಕಾಗೋಷ್ಠಿಯಲ್ಲಿ ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯ ಮೊದಲ ಭಾಗವನ್ನು ಬಿಡುಗಡೆ ಮಾಡಿ, ‘ಪಕ್ಷದ ಪ್ರಣಾಳಿಕೆಯು ದೆಹಲಿ ಅಭಿವೃದ್ಧಿಗೆ ತಳಪಾಯವಾಗಲಿದೆ’ ಎಂದರು.

ಇನ್ನು ಇದೇ ವೇಳೆ ಆಪ್‌ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಆಪ್‌ ಸರ್ಕಾರದಲ್ಲಿನ ಎಲ್ಲ ಭ್ರಷ್ಟಚಾರ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಫೆ. 5 ರಂದು ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, 8ಕ್ಕೆ ಫಲಿತಾಂಶ ಹೊರ ಬೀಳಲಿದೆ.

ಬಿಜೆಪಿ ಪ್ರಣಾಳಿಕೆ ಆಪ್ ಯೋಜನೆಗಳ ನಕಲು: ಕೇಜ್ರಿ 

ನವದೆಹಲಿ: ಬಿಜೆಪಿ ದೆಹಲಿ ವಿಧಾನಸಭೆಗೆ ಚುನಾವಣೆಗೆ ಉಚಿತ ಕೊಡುಗೆಗಳ ಪ್ರಣಾಳಿಕೆ ಘೋಷಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

‘ಬಿಜೆಪಿ ಆಮ್‌ ಆದ್ಮಿ ಪಕ್ಷದಿಂದ ನಕಲು ಮಾಡಿದೆ. ಆದರೆ ಉಚಿತಗಳ ವಿರೋಧೀಯಾದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆಗಳನ್ನು ತಾವು ಒಪ್ಪಲ್ಲ ಎಂದು ಹೇಳಬೇಕು’ ಎಂದು ಕೇಜ್ರಿವಾಲ್‌ ವ್ಯಂಗ್ಯವಾಡಿದ್ದ, ’ಈಗಲಾದರೂಈ ಮೋದಿ ಉಚಿತ ಯೋಜನೆಗಳು ದೇಶಕ್ಕೆ ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳಲಿ’ ಎಂದಿದ್ದಾರೆ.

ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಉಚಿತ ಭರವಸೆಗಳನ್ನು ಟೀಕಿಸುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಅರಿತುಕೊಳ್ಳಬೇಕು. ಆಪ್ ಉಚಿತ ಯೋಜನೆಗಳನ್ನು ನೀಡುತ್ತದೆ ಎಂದು ಬಿಜೆಪಿ ಪದೇ ಪದೇ ಹೇಳುತ್ತದೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ, ತಾವೂ ಕೂಡ ದೆಹಲಿಯ ಜನತೆಗೆ ಉಚಿತ ಭರವಸೆಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. 

ಮೋದಿ ನಮ್ಮ ಬಗ್ಗೆ ಮಾಡಿದ ಟೀಕೆ ತಪ್ಪು ಎಂದು ಒಪ್ಪಿಕೊಳ್ಳಬೇಕು. ಉಚಿತ ಯೋಜನೆಗಳು ತಪ್ಪಲ್ಲ ಎನ್ನುವುದು ಅರಿತುಕೊಳ್ಳಬೇಕು. ಅದು ದೇವರ ಕೊಡುಗೆ. ಅದರಿಂದ ದೇಶಕ್ಕೆ ಒಳ್ಳೆಯದು. ಮೋದಿಯವರು ಮುಂದೆ ಬಂದು ಬಿಜೆಪಿ ನೀಡಿರುವ ಭರವಸೆಗಳಿಗೆ ಒಪ್ಪಿಗೆ ನೀಡಬೇಕು’ ಎಂದರು.

ಅಲ್ಲದೇ ಬಿಜೆಪಿಯು ತಮ್ಮ ಪ್ರಣಾಳಿಕೆಯನ್ನು ನಕಲು ಮಾಡಿದೆ ಎಂದು ಆರೋಪಿಸಿರುವ ಆಪ್‌, ‘ ಬಿಜೆಪಿಯ ಪ್ರಣಾಳಿಕೆಯು ಆಪ್‌ ಈಗಾಗಲೇ ನೀಡುತ್ತಿರುವ ಭರವಸೆಯನ್ನು ಮಾತ್ರ ನೀಡುತ್ತಿದೆ. ಹಾಗಾದರೆ ಜನರು ಅವರಿಗೆ ಏಕೆ ಮತ ಹಾಕಬೇಕು. ಬಿಜೆಪಿ ಪ್ರಣಾಳಿಕೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಭರವಸೆಯನ್ನು ನೀಡಲು ವಿಫಲವಾಗಿದೆ. ಹಳೆಯ ಯೋಜನೆಗಳನ್ನೇ ಭರವಸೆ ನೀಡಿದೆ. ಮೊಹಲ್ಲಾ ಕ್ಲಿನಿಕ್‌ಗಳನ್ನು ಮುಚ್ಚಲಾಗುತ್ತದೆ ಎಂದು ಬಿಜೆಪಿ ಭರವಸೆ ಹೇಳುತ್ತದೆ. ಈ ಕ್ಲಿನಿಕ್ ಬೇಕೋ ಬೇಡವೋ ಎಂದು ಕೇಳಲು ಆಪ್ ದೆಹಲಿ ಜನರ ಬಳಿ ಹೋಗಲಿದೆ’ ಎಂದರು.