ಸಾರಾಂಶ
ಶಿರೋಮಣಿ ಬೇಡಿಕೆಗೆ ಬಿಜೆಪಿ ನಾಯಕರ ವಿರೋಧ ವ್ಯಕ್ತವಾಗಿದ್ದು, ಮೈತ್ರಿ ಮಾತುಕತೆ ವಿಫಲಗೊಂಡಿದೆ. ಆಪ್ ಏಕಾಂಗಿ ಸ್ಪರ್ಧೆ ಹಿನ್ನೆಲೆ ಬಿಜೆಪಿ ತಂತ್ರವೂ ಬದಲು ಮಾಡಿಕೊಂಡಿದೆ ಎನ್ನಲಾಗಿದೆ.
ನವದೆಹಲಿ: ಪಂಜಾಬ್ನಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡಿರುವ ಶಿರೋಮಣಿ ಅಕಾಲಿ ದಳದ ಜೊತೆ ಬಿಜೆಪಿ ಮರುಮೈತ್ರಿ ಮಾಡಿಕೊಳ್ಳುವ ಮಾತುಕತೆಗಳು ವಿಫಲವಾಗಿವೆ ಎಂದು ಮೂಲಗಳು ತಿಳಿಸಿವೆ.
ಅಕಾಲಿ ದಳದ ನಾಯಕರು ಮೈತ್ರಿಗೆ ರೈತರ ಬೇಡಿಕೆ ಈಡೇರಿಕೆ ಹಾಗೂ ಸಿಖ್ ಕೈದಿಗಳ ಬಿಡುಗಡೆಯ ಷರತ್ತನ್ನು ಮುಂದಿಟ್ಟಿದ್ದು ಮಾತುಕತೆಗೆ ಅಡ್ಡಿಯಾಗಿತ್ತು.
ಅದರ ಬೆನ್ನಲ್ಲೇ ಆಮ್ಆದ್ಮಿ ಪಕ್ಷದ ಕೂಡಾ ಇಂಡಿಯಾ ಕೂಟಕ್ಕೆ ಯಾವುದೇ ಸೀಟು ನೀಡದೇ ಏಕಾಂಗಿಯಾಗಿ ಕಣಕ್ಕೆ ಇಳಿಯುವ ನಿರ್ಧಾರ ಪ್ರಕಟಿಸಿದ ಕಾರಣ ಸ್ಥಳೀಯ ಬಿಜೆಪಿ ನಾಯಕರು ಕೂಡಾ ಶಿರೋಮಣಿ ಮೈತ್ರಿ ಬಿಟ್ಟು ಏಕಾಂಗಿಯಾಗಿಯೇ ಕಣಕ್ಕಿಳಿಯುವ ಬಗ್ಗೆ ಒಲವು ತೋರಿದ್ದರು.
ಹೀಗಾಗಿ ಉಭಯ ಪಕ್ಷಗಳ ನಡುವಣ ಮೈತ್ರಿ ಮಾತುಕತೆ ಮುರಿದುಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಅಕಾಲಿ ದಳವು 2020ರಲ್ಲಿ ರೈತರ ಬೇಡಿಕೆ ಸಂಬಂಧ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡಿತ್ತು.