ಸಿಂಧುದುರ್ಗದಲ್ಲಿ ಶಿವಾಜಿ ಪ್ರತಿಮೆ ಕುಸಿತ: ಪ್ರಧಾನಿ ನರೇಂದ್ರ ಮೋದಿಯಿಂದ ಬಹಿರಂಗ ಕ್ಷಮೆಯಾಚನೆ

| Published : Aug 31 2024, 01:42 AM IST / Updated: Aug 31 2024, 04:38 AM IST

ಸಾರಾಂಶ

ಸಿಂಧುದುರ್ಗದಲ್ಲಿ ಶಿವಾಜಿ ಪ್ರತಿಮೆ ಕುಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಕ್ಷಮೆಯಾಚಿಸಿದ್ದಾರೆ. ಶಿವಾಜಿ ಮಹಾರಾಜರು ನಮಗೆ ದೇವರ ಸಮಾನ ಎಂದ ಅವರು, ಪ್ರತಿಮೆ ಕುಸಿತದಿಂದ ನೋವು ಅನುಭವಿಸಿದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಪಾಲ್ಘರ್‌ (ಮಹಾರಾಷ್ಟ್ರ) : ಮಹಾರಾಷ್ಟ್ರದ ಸಿಂಧುದುರ್ಗ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪ್ರತಿಮೆ ಕುಸಿದುಬಿದ್ದಿದ್ದು ಮಹಾರಾಷ್ಟ್ರ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದು, ಬಹಿರಂಗ ಕ್ಷಮೆಯಾಚಿಸಿದ್ದಾರೆ.

‘ಛತ್ರಪತಿ ಶಿವಾಜಿ ಮಹಾರಾಜ್‌ ಎಂಬುದು ಕೇವಲ ರಾಜನ ಹೆಸರಲ್ಲ. ನಮಗೆ ಅವರು ದೇವರು. ನಾನಿಂದು ಅವರ ಕಾಲಿಗೆ ತಲೆಯಿಟ್ಟು ಕ್ಷಮೆ ಕೇಳುತ್ತೇನೆ’ ಎಂದು ಶುಕ್ರವಾರ ಪ್ರಧಾನಿ ಹೇಳಿದ್ದಾರೆ.

ಮಹಾರಾಷ್ಟ್ರ ಪಾಲ್ಘರ್‌ ಜಿಲ್ಲೆಯಲ್ಲಿ ನೂತನ ಬಂದರು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ನಮ್ಮ ಮೌಲ್ಯಗಳು ಬೇರೆ. ನನಗೆ ನಮ್ಮ ದೇವರಿಗಿಂತ ದೊಡ್ಡವರು ಯಾರೂ ಇಲ್ಲ. ಶಿವಾಜಿ ನಮಗೆ ದೇವರು. ನಾನು ಇಲ್ಲಿಗೆ ಬಂದಿಳಿದ ತಕ್ಷಣ ಮೊದಲು ಮಾಡಿದ ಕೆಲಸವೇ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿದ್ದಕ್ಕೆ ಕ್ಷಮೆ ಕೇಳಿದ್ದು. ಇದರಿಂದ ನೋವು ಅನುಭವಿಸಿದ ಜನರಲ್ಲೂ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದರು.

ರಾಹುಲ್‌ ಗಾಂಧಿಗೆ ಟಾಂಗ್‌:

‘ಕೆಲವರು ವೀರ ಸಾವರ್ಕರ್‌ ಅವರನ್ನು ಅವಮಾನಿಸುತ್ತಲೇ ಇರುತ್ತಾರೆ. ಆದರೆ ಕ್ಷಮೆ ಕೇಳುವುದಿಲ್ಲ’ ಎಂದು ಇದೇ ವೇಳೆ ಮೋದಿ ಹೇಳಿದರು. ಈ ಮೂಲಕ ಈ ಹಿಂದೊಮ್ಮೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಕಿಚಾಯಿಸಿದರು.

ಕಳೆದ ಡಿಸೆಂಬರ್‌ನಲ್ಲಿ ಮೋದಿ ಉದ್ಘಾಟಿಸಿದ್ದ ಹಾಗೂ ನೌಕಾಪಡೆ-ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ನಿರ್ಮಿಸಿದ್ದ ಶಿವಾಜಿ ಪ್ರತಿಮೆ ಕೆಲ ದಿನಗಳ ಹಿಂದೆ ಕುಸಿದುಬಿದ್ದಿತ್ತು. ಇದಾದ ಬಳಿಕ ರಾಜ್ಯದಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದು, ಮುಖ್ಯಮಂತ್ರಿ ಏಕನಾಥ ಶಿಂಧೆ ರಾಜೀನಾಮೆಗೆ ಒತ್ತಾಯಿಸುತ್ತಿವೆ.

- ನೌಕಾಪಡೆ-ಮಹಾರಾಷ್ಟ್ರ ಸರ್ಕಾರಗಳು ಸಿಂಧುದುರ್ಗದಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಿದ್ದವು- 9 ತಿಂಗಳ ಹಿಂದೆ ಮೋದಿ ಪ್ರತಿಮೆ ಉದ್ಘಾಟಿಸಿದ್ದರು. ಕೆಲ ದಿನಗಳ ಹಿಂದೆ ಅದು ಬಿದ್ದಿತ್ತು

- ಇದರ ಬೆನ್ನಲ್ಲೇ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ಕಾರಿದ್ದವು

- ಶುಕ್ರವಾರ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಪ್ರಧಾನಿ ಅವರಿಂದ ಕ್ಷಮೆ ಯಾಚನೆ

- ಸಾವರ್ಕರ್‌ ಅಪಮಾನಿಸಿದವರು ಕ್ಷಮೆ ಕೇಳಲ್ಲ ಎಂದು ರಾಹುಲ್‌ ಗಾಂಧಿಗೆ ಟಾಂಗ್‌