ಸಾರಾಂಶ
ಸಿಎಂ ಯೋಗಿ ಜಾಗಕ್ಕೆ ಎ.ಕೆ. ಶರ್ಮಾ ನೇಮಿಸುವ ಕುರಿತು ಬ್ರಿಜ್ ಭೂಷಣ್ ಸುಳಿವು ನೀಡಿದ್ದು, ಶರ್ಮಾರನ್ನು ‘ಯಶಸ್ವಿ ಸಿಎಂ’ ಎಂದ ಬ್ರಿಜ್ ಯೋಗಿ ಬದಲಾವಣೆ ಎಂಬ ಕೇಜ್ರಿ ಹೇಳಿಕೆಗೆ ಪುಷ್ಟಿ ನೀಡಿದ್ದಾರೆ.
ಅಯೋಧ್ಯೆ: ‘ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾದರೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತು ಹಾಕಲಿದ್ದಾರೆ’ ಎಂದು ಇತ್ತೀಚೆಗಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಫೋಟಕ ಆರೋಪ ಮಾಡಿದ್ದರು. ಇದೀಗ ಅಂಥದ್ದೇ ಸುಳಿವನ್ನು ಬಿಜೆಪಿ ಸಂಸದ ಮತ್ತು ಯೋಗಿ ಜೊತೆಗೆ ಹೆಚ್ಚೇನೂ ಉತ್ತಮ ಸಂಬಂಧ ಹೊಂದಿಲ್ಲದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ನೀಡಿದ್ದಾರೆ.
ಯೋಗಿ ಜಾಗಕ್ಕೆ ಅವರದ್ದೇ ಸಂಪುಟದಲ್ಲಿ ಇಂಧನ ಖಾತೆ ಸಚಿವರ ಅರವಿಂದ ಕುಮಾರ್ ಶರ್ಮಾ ಅವರನ್ನು ನೇಮಿಸಲಾಗುವುದು ಎಂಬರ್ಥದ ಸೂಚನೆಯನ್ನು ಬ್ರಿಜ್ ನೀಡಿದ್ದಾರೆ.ಕೈಸರ್ಗಂಜ್ ಕ್ಷೇತ್ರದಲ್ಲಿ ತಮ್ಮ ಪುತ್ರ, ಬಿಜೆಪಿ ಅಭ್ಯರ್ಥಿ ಕರಣ್ ಸಿಂಗ್ ಪರವಾಗಿ ಚುನಾವಣೆ ಪ್ರಚಾರ ಮಾಡಲು ಬ್ರಿಜ್ ಭೂಷಣ್ ಆಗಮಿಸಿದ್ದರು. ಸಚಿವ ಎ.ಕೆ.ಶರ್ಮಾ ಕೂಡ ಅವರ ಜತೆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಜ್, ‘ಎ.ಕೆ.ಶರ್ಮಾ ಯಶಸ್ವಿ ಮುಖ್ಯಮಂತ್ರಿ’ ಎಂದು ಸಂಬೋಧಿಸಿ ಅಚ್ಚರಿ ಮೂಡಿಸಿದರು. ಈ ಮಾತಿಗೆ ಶರ್ಮಾ ಕೂಡಾ ಖುಷಿಯಾಗಿ ನಕ್ಕಿದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಯಿತು.