ಬ್ರಿಟನ್‌ನಿಂದ ಹೊರಹೋಗಲು ನಿರ್ಬಂಧವಿದೆ

ಬಾಂಬೆ ಹೈಕೋರ್ಟ್‌ಗೆ ದೇಶಭ್ರಷ್ಟ ಉದ್ಯಮಿ ಹೇಳಿಕೆಮುಂಬೈ: ‘ನನ್ನ ಪಾಸ್‌ಪೋರ್ಟ್‌ ರದ್ದಾಗಿದೆ. ಬ್ರಿಟನ್‌ನಿಂದ ಹೊರಹೋಗಲು ನನಗೆ ನಿರ್ಬಂಧವಿಎ. ಹೀಗಾಗಿ ಭಾರತಕ್ಕೆ ಯಾವಾಗ ವಾಪಸ್‌ ಆಗುತ್ತೇನೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ’ ಎಂದು ದೇಶಭ್ರಷ್ಟ ಉದ್ಯಮಿ ವಿಜಯ್‌ ಮಲ್ಯ ತಿಳಿಸಿದ್ದಾರೆ.

ಮಲ್ಯ ಅವರು ಭಾರತಕ್ಕೆ ವಾಪಸ್‌ ಆಗುವವರೆಗೆ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವ ಆದೇಶದ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾ। ಶ್ರೀ ಚಂದ್ರಶೇಖರ್‌ ಮತ್ತು ನ್ಯಾ। ಗೌತಂ ಅಖಂಡ್‌ ಅವರಿದ್ದ ಪೀಠ ಕಳೆದ ವಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಮಲ್ಯ ಅವರು ಈ ಹೇಳಿಕೆ ಸಲ್ಲಿಸಿದ್ದಾರೆ.

‘ನನ್ನ ಭಾರತೀಯ ಪಾಸ್‌ಪೋರ್ಟ್‌ 2016ರಲ್ಲಿ ರದ್ದಾದ ಬಳಿಕ ಯಾವುದೇ ಸಕ್ರಿಯ ಪಾಸ್‌ಪೋರ್ಟ್ ಇಲ್ಲ. ಹೀಗಾಗಿ ಭಾರತಕ್ಕೆ ಯಾವಾಗ ವಾಪಸಾಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ತಮ್ಮ ವಕೀಲ ಅಮಿತ್‌ ದೇಸಾಯಿ ಮೂಲಕ ಮಲ್ಯ ಅವರು ಹೇಳಿಕೆ ಸಲ್ಲಿಸಿದ್ದಾರೆ.

ಆಗ ಪೀಠವು ಮಲ್ಯ ಹೇಳಿಕೆಗೆ ಸಂಬಂಧಿಸಿ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್‌ಗೆ ಮುಂದೂಡಿದೆ. ಮಲ್ಯ ಅವರು 2016ರಿಂದ ಭಾರತ ತೊರೆದು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.