ನವದೆಹಲಿ: 2025-26ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆಯಾಗಿ ಶೇ 93.7ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಗಿಂತ ಈ ಸಲ ಫಲಿತಾಂಶ ಅಲ್ಪ ಏರಿಕೆಯಾಗಿದೆ. 2025ರಲ್ಲಿ ಶೇ.93.66 ರಷ್ಟು ದಾಖಲಾಗಿತ್ತು. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.94.99ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಬಾಲಕರ ಸಂಖ್ಯೆ ಶೇ.93.69 . ಈ ಬಾರಿ 24.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

==

ಪಂಜಾಬ್‌ ಸರ್ಕಾರ ಭದ್ರತೆ

ವಾಪಸ್‌ ಬೆನ್ನಲ್ಲೇ ಚಡ್ಢಾಗೆ

ಕೇಂದ್ರ ಝಡ್‌ ಶ್ರೇಣಿ ಭದ್ರತೆ


ನವದೆಹಲಿ: ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡಾಗೆ ಆಪ್‌ ನೇತೃತ್ವದ ಪಂಜಾಬ್‌ ಸರ್ಕಾರ ಝಡ್ ಪ್ಲಸ್‌ ಭದ್ರತೆ ಹಿಂಪಡೆದ ಬೆನ್ನಲ್ಲೇ, ಕೇಂದ್ರ ಸರ್ಕಾರ ಚಡ್ಡಾಗೆ ಝಡ್‌ ಶ್ರೇಣಿಯ ಭದ್ರತೆ ಕಲ್ಪಿಸಿದೆ. ಆಪ್‌ ನಾಯಕತ್ವ ಮತ್ತು ಚಡ್ಡಾ ನಡುವೆ ಗುದ್ದಾಟ ನಡೆಯುತ್ತಿರುವ ಮಧ್ಯೆಯೇ, ಕೇಂದ್ರದ ಕ್ರಮ ಚಡ್ಢಾ ಬಿಜೆಪಿ ಸೇರ್ಪಡೆ ಕುರಿತು ಚರ್ಚೆ ಹುಟ್ಟುಹಾಕಿದೆ. ಚಡ್ಡಾರನ್ನು ಇತ್ತೀಚೆಗಷ್ಟೇ ರಾಜ್ಯಸಭೆಯ ತನ್ನ ಉಪನಾಯಕ ಸ್ಥಾನದಿಂದ ಆಪ್‌ ವಜಾಗೊಳಿಸಿತ್ತು. ಅದರ ಬೆನ್ನಲ್ಲೇ ಅವರಿಗೆ ಪಂಜಾಬ್‌ ಸರ್ಕಾರ, ಝಡ್ ಪ್ಲಸ್‌ ಶ್ರೇಣಿಯ ಭದ್ರತೆ ಹಿಂತೆಗೆದುಕೊಂಡಿತು. ಅದರ ಬೆನ್ನಲ್ಲೇ ದೆಹಲಿ ಮತ್ತು ಪಂಜಾಬ್‌ ಎರಡೂ ಕಡೆಗಳಲ್ಲಿ ಝಡ್‌ ಶ್ರೇಣಿ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.

==

ರಾಜ್ಯಸಭೆಯಲ್ಲಿ ಚಡ್ಡಾ

ಸ್ಥಾನ ಏರಿದ್ದ ಆಪ್‌ನ

ಮಿತ್ತಲ್‌ಗೆ ಇ.ಡಿ.ಶಾಕ್‌

ಜಲಂಧರ್‌/ನವದೆಹಲಿ: ಇತ್ತೀಚೆಗೆ ರಾಜ್ಯಸಭೆಯಲ್ಲಿ ಆಪ್‌ನ ಉಪನಾಯಕ ಸ್ಥಾನದಿಂದ ಸಂಸದ ರಾಘವ್‌ ಚಡ್ಡಾ ವಜಾಬಳಿಕ ಆ ಸ್ಥಾನ ಏರಿದ್ದ ಸಂಸದ ಅಶೋಕ್‌ ಕುಮಾರ್‌ ಮಿತ್ತಲ್‌ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಮಿತ್ತಲ್‌, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್‌ಪಿಯು) ಹಾಗೂ ಹಲವು ಕಾಲೇಜುಗಳನ್ನು ಮುನ್ನಡೆಸುತ್ತಿದ್ದಾರೆ. ಅವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

==

ಅಸ್ಸಾಂ ಸಿಎಂ ಪತ್ನಿಯ

ಟೀಕಿಸಿದ್ದ ಕೈನ ಖೇರಾ

ಬೇಲ್‌ಗೆ ಸುಪ್ರೀಂ ತಡೆ

ನವದೆಹಲಿ: ಅಸ್ಸಾಂ ಸಿಎಂ ಹಿಮಂತ ಅವರ ಪತ್ನಿ ಟೀಕಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ಪವನ್‌ ಖೇರಾಗೆ ತೆಲಂಗಾಣ ಹೈಕೋರ್ಟ್‌ ನೀಡಿದ್ದ ಒಂದು ವಾರಗಳ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನಿಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ಖೇರಾ ನಕಲಿ ದಾಖಲೆಗಳನ್ನು ಸಲ್ಲಿಸಿದ ಜಾಮೀನು ಪಡೆದಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಈ ತಡೆ ನೀಡಿದೆ. ಆದರೆ ಒಂದು ವಾರದೊಳಗೆ ಖೇರಾ ತಮ್ಮ ವಿರುದ್ಧ ಅಸ್ಸಾಂ ಪೊಲೀಸರು ದೂರು ದಾಖಲಿಸಿದ್ದ ಅಸ್ಸಾಂನಲ್ಲಿ ಜಾಮೀನು ಪಡೆದುಕೊಂಡರೆ ಆಗ ಈ ತಡೆ ಅನ್ವಯವಾಗದು ಎಂದು ಕೋರ್ಟ್‌ ಹೇಳಿದೆ.