ಸಾರಾಂಶ
ತನ್ನ ನೌಕರರಿಗೆ ದೀಪಾವಳಿ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ ಪ್ರಮಾಣವನ್ನು ಶೇ.3ರಷ್ಟು ಹೆಚ್ಚಳ ಮಾಡಿದೆ.
ನವದೆಹಲಿ: ತನ್ನ ನೌಕರರಿಗೆ ದೀಪಾವಳಿ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ ಪ್ರಮಾಣವನ್ನು ಶೇ.3ರಷ್ಟು ಹೆಚ್ಚಳ ಮಾಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಜುಲೈ 1ರಿಂದಲೇ ಈ ಏರಿಕೆ ಪೂರ್ವಾನ್ವಯವಾಗಲಿದ್ದು, ಇದರಿಂದ 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ಈ ಏರಿಕೆಯಿಂದ ಸರ್ಕಾರಕ್ಕೆ 9448 ಕೋಟಿ ರು. ಹೊರೆ ಬೀಳಲಿದೆ.ಕಳೆದ ಮಾರ್ಚ್ನಲ್ಲಿ ಕೂಡಾ ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಳ ಮಾಡಿತ್ತು.
==ವಕ್ಫ್ ಆಸ್ತಿ ಮೇಲೆ ಸಂಸತ್ ನಿರ್ಮಾಣ: ಮಾಜಿ ಸಂಸದ ಬದ್ರುದ್ದೀನ್
ಗುವಾಹಟಿ: ದೇಶದ ಸಂಸತ್ ಭವನ, ದೆಹಲಿಯಲ್ಲಿರುವ ವಸಂತ ವಿಹಾರ ಮತ್ತು ದೆಹಲಿ ವಿಮಾನ ನಿಲ್ದಾಣ ವರೆಗಿನ ಸುತ್ತಮುತ್ತಲಿನ ಪ್ರದೇಶವೆಲ್ಲಾ ವಕ್ಫ್ ಆಸ್ತಿಗೆ ಸೇರಿದೆ ಎಂದು ಮಾಜಿ ಸಂಸದ, ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುವಾಹಟಿಯಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ವಿಶ್ವಾದ್ಯಂತ ವಕ್ಫ್ಗೆ ಸೇರಿದ ಆಸ್ತಿಗಳ ಪಟ್ಟಿ ಬಿಡುಗಡೆಯಾಗಿದೆ. ದೇಶದ ಸಂಸತ್ ಭವನ, ವಸಂತ ವಿಹಾರ ಮತ್ತು ದೆಹಲಿ ವಿಮಾನ ನಿಲ್ದಾಣದ ಮಾರ್ಗದಲ್ಲಿನ ಸುತ್ತಮುತ್ತಲಿನ ಪ್ರದೇಶವೆಲ್ಲಾ ವಕ್ಫ್ಗೆ ಸೇರಿದೆ. ವಿಮಾನ ನಿಲ್ದಾಣವೂ ವಕ್ಫ್ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಜನ ಹೇಳುತ್ತಾರೆ. ವಕ್ಫ್ ಅನುಮತಿ ಇಲ್ಲದೆ ಆಸ್ತಿಯನ್ನು ಬಳಸುವುದು ತಪ್ಪು ಎಂದು ಬದ್ರುದ್ದೀನ್ ಹೇಳಿದರು.