ಮಹತ್ವದ ತೀರ್ಮಾನವೊಂದರಲ್ಲಿ, 5 ಮತ್ತು 8 ನೇ ತರಗತಿ ಮಕ್ಕಳನ್ನು ಫೇಲ್‌ ಮಾಡಲು ಇನ್ನು ಅವಕಾಶ

| Published : Dec 24 2024, 12:48 AM IST / Updated: Dec 24 2024, 03:39 AM IST

ಸಾರಾಂಶ

ಮಹತ್ವದ ತೀರ್ಮಾನವೊಂದರಲ್ಲಿ, 5 ಮತ್ತು 8 ನೇ ತರಗತಿಗಳಿಗೆ ‘ನೋ-ಡಿಟೆನ್ಷನ್ ನೀತಿ’ಯನ್ನು (ಯಾರನ್ನೂ ಅನುತ್ತೀರ್ಣ ಮಾಡಬಾರದು ಎಂಬ ನೀತಿ ಅಥವಾ ಎಲ್ಲರೂ ಪಾಸ್‌ ಎಂಬ ನೀತಿ) ಕೇಂದ್ರವು ತನ್ನ ಆಡಳಿತದ ಶಾಲೆಗಳಲ್ಲಿ ರದ್ದುಗೊಳಿಸಿದೆ.  

 ನವದೆಹಲಿ : ಮಹತ್ವದ ತೀರ್ಮಾನವೊಂದರಲ್ಲಿ, 5 ಮತ್ತು 8 ನೇ ತರಗತಿಗಳಿಗೆ ‘ನೋ-ಡಿಟೆನ್ಷನ್ ನೀತಿ’ಯನ್ನು (ಯಾರನ್ನೂ ಅನುತ್ತೀರ್ಣ ಮಾಡಬಾರದು ಎಂಬ ನೀತಿ ಅಥವಾ ಎಲ್ಲರೂ ಪಾಸ್‌ ಎಂಬ ನೀತಿ) ಕೇಂದ್ರವು ತನ್ನ ಆಡಳಿತದ ಶಾಲೆಗಳಲ್ಲಿ ರದ್ದುಗೊಳಿಸಿದೆ. ಇದು ದೇಶದ 3000 ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸೈನಿಕ ಶಾಲೆಗಳಿಗೆ ಅನ್ವಯಿಸಲಿದೆ.

ಈ ಪ್ರಕಾರ, 5 ಹಾಗೂ 8ನೇ ಕ್ಲಾಸಿನ ವಾರ್ಷಿಕ ಪರೀಕ್ಷೆಗಳಲ್ಲಿ ಫೇಲಾದರೆ ಮಕ್ಕಳಿಗೆ 2 ತಿಂಗಳಲ್ಲಿ ಮರುಪರೀಕ್ಷೆ ನಡೆಸಲು ಅವಕಾಶ ನೀಡಲಾಗುತ್ತದೆ. ಆಗಲೂ ಅವರು ಫೇಲಾದರೆ ಮತ್ತೆ ಅವರನ್ನು 5 ಅಥವಾ 8ನೇ ಕ್ಲಾಸಲ್ಲೇ ಕೂರಿಸಬೇಕು ಎಂದು ಸೂಚಿಸಲಾಗಿದೆ.2019ರಲ್ಲಿ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ತಿದ್ದುಪಡಿಯ ನಂತರ, ಈಗಾಗಲೇ 18 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಎಲ್ಲರೂ ಪಾಸ್‌’ ಎಂಬ ನೀತಿಯನ್ನು 5 ಹಾಗೂ 8ನೇ ಕ್ಲಾಸ್‌ಗಳಿಗೆ ಜಾರಿ ಮಾಡಲಾಗಿದೆ. ಈಗ ಕೇಂದ್ರೀಯ ಶಾಲೆಗಳಿಗೂ ಇದನ್ನು ವಿಸ್ತರಿಸಲಾಗಿದೆ. ಆದರೆ ಈ 16 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವಿಲ್ಲ.

ಹೊಸ ನಿಯಮವೇನು?:

ಗೆಜೆಟ್ ಅಧಿಸೂಚನೆಯ ಪ್ರಕಾರ, ನಿಯಮಿತ ಪರೀಕ್ಷೆಯ ನಂತರ, ಕಾಲಕಾಲಕ್ಕೆ ಸೂಚಿಸಿದಂತೆ ಬಡ್ತಿ ಮಾನದಂಡಗಳನ್ನು ಪೂರೈಸಲು ಮಗು ವಿಫಲವಾದರೆ, ಫಲಿತಾಂಶ ಘೋಷಣೆಯ ದಿನಾಂಕದಿಂದ 2 ತಿಂಗಳೊಳಗೆ ಮರು ಪರೀಕ್ಷೆ ನಡೆಸಲಾಗುತ್ತದೆ. ಮರು ಪರೀಕ್ಷೆಯಲ್ಲಿ ಹಾಜರಾಗುವ ಮಗು ಮತ್ತೆ ಬಡ್ತಿ ಮಾನದಂಡ ಪೂರೈಸಲು ವಿಫಲವಾದಲ್ಲಿ, ವಿದ್ಯಾರ್ಥಿಯನ್ನು 5ನೇ ತರಗತಿ ಅಥವಾ 8ನೇ ತರಗತಿಗೆ ಹಿಂತಿರುಗಿಸಲಾಗುತ್ತದೆ.

ಆದರೆ, ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೆ ಯಾವುದೇ ಶಾಲೆಯಿಂದ ಯಾವುದೇ ಮಗುವನ್ನು ಅನುತ್ತೀರ್ಣಗೊಳಿಸಿ ಹೊರಹಾಕುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯಾರಿಗೆ ಅನ್ವಯ?:

ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರವು ನಡೆಸುತ್ತಿರುವ 3,000 ಶಾಲೆಗಳಿಗೆ ಅಧಿಸೂಚನೆಯು ಅನ್ವಯಿಸುತ್ತದೆ.ಅಲ್ಲದೆ, ಶಾಲಾ ಶಿಕ್ಷಣವು ರಾಜ್ಯದ ವಿಷಯವಾಗಿರುವುದರಿಂದ, ರಾಜ್ಯಗಳು ಈ ವಿಷಯದಲ್ಲಿ ತಮ್ಮ ನಿರ್ಧಾರವನ್ನು ಮಾಡಬಹುದು. ಈಗಾಗಲೇ ದೆಹಲಿ ಸೇರಿದಂತೆ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು 5 ಮತ್ತು 8ನೇ ಕ್ಲಾಸ್‌ಗೆ ‘ಎಲ್ಲರೂ ಪಾಸ್‌ ನೀತಿ’ಯನ್ನು ತೆಗೆದುಹಾಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.