ದೇಶದ ಪರವಾಗಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಪೂಜಾವಿಧಿಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂದು ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಯ ಮುಖ್ಯ ಪುರೋಹಿತ ಲಕ್ಷ್ಮೀಕಾಂತ ದೀಕ್ಷಿತ್ ಸ್ಪಷ್ಟನೆ ನೀಡಿದ್ದಾರೆ.
ವಾರಾಣಸಿ: ಅಯೋಧ್ಯೆ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೇ ‘ಯಜಮಾನತ್ವ’ ವಹಿಸಿ ಭಾಗಿಯಾಗಲಿದ್ದಾರೆ ಎಂದು ಪೂಜಾವಿಧಿಗಳ ಮುಖ್ಯ ಉಸ್ತುವಾರಿಯಾಗಿರುವ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.
ಪ್ರಾಣಪ್ರತಿಷ್ಠಾಪನೆಯ ಪೂಜಾವಿಧಿಗಳು ಆರಂಭದ ಮೊದಲ ದಿನದ ಪೂಜಾ ಕಾರ್ಯಕ್ರಮಗಳಲ್ಲಿ ರಾಮಮಂದಿರ ನಿರ್ಮಾಣ ಟ್ರಸ್ಟ್ನ ಸದಸ್ಯರಾದ ಅನಿಲ್ ಮಿಶ್ರಾ ಹಾಗೂ ಅವರ ಪತ್ನಿ ಉಷಾ ಮಿಶ್ರಾ ಅವರು ‘ಯಜಮಾನತ್ವ’ ವಹಿಸಿದ್ದರು.
ಹೀಗಾಗಿ ಜ.22ರ ಕಾರ್ಯಕ್ರಮದ ಯಜಮಾನರ ಕುರಿತು ಪ್ರಶ್ನೆಗಳು ಎದ್ದಿದ್ದವು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಪಂ. ಲಕ್ಷ್ಮೀಕಾಂತ್ ದೀಕ್ಷಿತ್, ಪ್ರಧಾನಿಯವರು ಸುದೀರ್ಘ ಕಾಲ ಆಯೋಧ್ಯೆ ಪೂಜಾ ವಿಧಿಗಳಲ್ಲಿ ಭಾಗಿಯಾಗುವುದು ಸಾಧ್ಯವಿಲ್ಲದ ಕಾರಣ ಆರಂಭಿಕ ದಿನಗಳಲ್ಲಿ ಬೇರೆ ಪ್ರಮುಖರನ್ನು ಯಜಮಾನರಾಗಿ ಕೂರಿಸಲಾಗುತ್ತದೆ.
ಆದರೆ ಜ.22ರಂದು ಸ್ವತಃ ಪ್ರಧಾನಿಯವರೇ ಯಜಮಾನರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಶಿಯ ಪಂ.ಲಕ್ಷ್ಮೀಕಾಂತ್ ದೀಕ್ಷಿತ್ ಹಾಗೂ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಮಂದಿರದ ಪ್ರಾಣಪ್ರತಿಷ್ಠಾಪನೆಗೆ ಮುಹೂರ್ತ ನಿಗದಿ ಮಾಡಿದ್ದಾರೆ.
ಜೊತೆಗೆ ಎಲ್ಲಾ ಪೂಜಾ ವಿಧಿವಿಧಾನಗಳು ಅವರ ನೇತೃತ್ವದಲ್ಲೇ ನಡೆಯಲಿವೆ.
