ಸಾರಾಂಶ
ಮುಂಬೈ : ಇತ್ತೀಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಳಕೆಯಾದ ಇವಿಎಂಗಳಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸಿದ ವಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು, ವಿಧಾನಸಭಾ ಸದಸ್ಯರಾಗಿ ಅಧಿವೇಶನದ ಮೊದಲನೇ ದಿನ ಪ್ರಮಾಣ ವಚನ ಸ್ವೀಕರಿಸಲಿಲ್ಲ.
3 ದಿನದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಸಿಎಂ ದೇವೆಂದ್ರ ಫಡ್ನವೀಸ್, ಡಿಸಿಎಂ ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ಸೇರಿದಂತೆ ಆಡಳಿತಾರೂಢ ಮಹಾಯುತಿ ಕೂಟದ ಹಲವು ನಾಯಕರಿಗೆ ಹಂಗಾಮಿ ಸ್ಪೀಕರ್ ಕಾಳಿದಾಸ ಕೊಲಾಂಬ್ಕರ್ ಶಪಥ ಬೋಧಿಸಿದರು. ಆದರೆ, ಕಾಂಗ್ರೆಸ್, ಶಿವ ಸೇನೆ (ಉದ್ಧವ್ ಬಣ), ಎನ್ಸಿಪಿ (ಶರದ್ ಬಣ)ಯ ಸದಸ್ಯರು ಪ್ರಮಾಣ ಸ್ವೀಕಾರಕ್ಕೆ ಬರಲಿಲ್ಲ.
ಈ ಕುರಿತು ಮಾತನಾಡಿದ ಶಿವ ಸೇನೆ(ಉದ್ಧವ್ ಬಣ) ನಾಯಕ ಆದಿತ್ಯ ಠಾಕ್ರೆ, ‘ಸರ್ಕಾರವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದರೆ ಸಂಭ್ರಮ ಸಹಜ. ಆದರೆ ಈ ಜನಾದೇಶವು ನಿಜವಾಗಿಯೂ ಜನರದ್ದೇ ಅಥವಾ ಇವಿಎಂ ಹಾಗೂ ಚುನಾವಣಾ ಆಯೋಗದ್ದೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತವೆ. ಹೀಗಾಗಿ ಜನರ ಮನಸ್ಸಿನಲ್ಲಿರುವ ಗೊಂದಲಗಳನ್ನು ಪರಿಗಣಿಸಿ ನಾವು ಪ್ರಮಾಣ ಸ್ವೀಕರಿಸುತ್ತಿಲ್ಲ’ ಎಂದರು. ಇವಿಎಂಗಳಲ್ಲಿ ಫಲಿತಾಂಶವನ್ನು ತಿರುಚಲಾಗಿದೆ ಎಂದು ಆರೋಪಿಸಿದರು.
ಅಂತೆಯೇ, ಕೆಲ ಗ್ರಾಮಗಳಲ್ಲಿ ಮರು ಮತದಾನಕ್ಕೆ ಅಡ್ಡಿಪಡಿಸಿದ ಕ್ರಮದ ವಿರುದ್ಧವೂ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು.