ಸಾರಾಂಶ
ತನಿಖಾ ಸಂಸ್ಥೆಗಳನ್ನು ಕಳಿಸಿ ಬಿಜೆಪಿಯಿಂದ ದೇಣಿಗೆ ವಸೂಲಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿಯು ಈ ರೀತಿ 30 ಕಂಪನಿಗಳಿಂದ ದೇಣಿಗೆ ಸಂಗ್ರಹ ಮಾಡಿದ ಕುರಿತು ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ ಮಾಡಿದೆ.
ನವದೆಹಲಿ: ಬಿಜೆಪಿಯು 2018-2023ರ ಅವಧಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಸುಮಾರು 30 ಕಂಪನಿಗಳ ಮೇಲೆ ದಾಳಿ ಮಾಡಿಸಿ ಬಲವಂತವಾಗಿ ಅವುಗಳಿಂದ ಪಕ್ಷಕ್ಕೆ 335 ಕೋಟಿ ರು.ಗೂ ಅಧಿಕ ದೇಣಿಗೆಯನ್ನು ಬಲವಂತವಾಗಿ ಪಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳಾದ ಜೈರಾಂ ರಮೇಶ್ ಹಾಗೂ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ. ಶುಕ್ರವಾರ ಮಾತನಾಡಿದ ಈ ನಾಯಕರು, ‘2019ರಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸಿದ 10 ದಿನದೊಳಗೆ 6 ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ. ಅದೇ ರೀತಿ 10ಕ್ಕೂ ಹೆಚ್ಚು ಕಂಪನಿಗಳು 2014ಕ್ಕೂ ಮೊದಲು ಬಿಜೆಪಿಗೆ ನಯಾಪೈಸೆ ದೇಣಿಗೆ ನೀಡಿಲ್ಲದಿದ್ದರೂ ಇತ್ತೀಚೆಗೆ ತನಿಖಾ ಸಂಸ್ಥೆಗಳು ದಾಳಿ ನಡೆಸಿದ ಬಳಿಕ ಬಿಜೆಪಿಗೆ ಅಧಿಕ ಮೊತ್ತದ ದೇಣಿಗೆ ನೀಡಿವೆ. ಈ ಕುರಿತು ಬಿಜೆಪಿಯು ಶ್ವೇತಪತ್ರ ಹೊರಡಿಸಬೇಕು ಮತ್ತು ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.