ಸಾರಾಂಶ
ಕೊಚ್ಚಿ: ದಿಲ್ಲಿ ಅಬಕಾರಿ ಹಗರಣದ ಬಳಿಕ ಕೇರಳದಲ್ಲೂ ಈಗ ಮದ್ಯದ ಬಿರುಗಾಳಿ ಎದ್ದಿದೆ. ’ಪ್ರತಿ ತಿಂಗಳ 1ನೇ ತಾರೀಖಿನಂದು ರಾಜ್ಯದಲ್ಲಿ ಜಾರಿಯಲ್ಲಿರುವ ಪಾನ ನಿಷೇಧ ತೆರವುಗೊಳಿಸಿಕೊಳ್ಳಲು ಹಾಗೂ ಐಟಿ ಪಾರ್ಕ್ಗಳಲ್ಲಿ ಪಬ್ ತೆರೆಯಬೇಕು ಎಂಬ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಹಣ ಸಂಗ್ರಹಿಸೋಣ’ ಎಂದು ಕೇರಳ ಬಾರ್ ಅಸೋಸಿಯೇಶನ್ ಸದಸ್ಯರೊಬ್ಬರು ಹೇಳಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್, ಎಡರಂಗ ನೇತೃತ್ವದ ಎಲ್ಡಿಎಫ್ ಸರ್ಕಾರದ ವಿರುದ್ಧ ವಾದ್ದಾಳಿ ನಡೆಸಿದ್ದು, ‘ತಮಗೆ ಬೇಕಾದಂತೆ ಅಬಕಾರಿ ನೀತಿ ರೂಪಿಸಲು ಎಡರಂಗವು ಮದ್ಯ ವ್ಯಾಪಾರಿಗಳಿಂದ 20 ಕೋಟಿ ರು. ಲಂಚ ಕೇಳಿದೆ’ ಎಂದು ಆಪಾದಿಸಿದೆ.
ಆದರೆ ಇದನ್ನು ತಳ್ಳಿಹಾಕಿರುವ ಅಬಕಾರಿ ಸಚಿವ ಎಂ.ಬಿ. ರಾಜೇಶ್ ಹಾಗೂ ಎಡರಂಗ ನಾಯಕರು, ‘ಇಂಥ ಚರ್ಚೆಯೇ ನಡೆದಿಲ್ಲ. ಇದು ಸುಳ್ಳು ಆರೋಪ’ ಎಂದಿದ್ದಾರೆ. ಇದೇ ವೇಳೆ, ಬಾರ್ ಸಂಘದ ಸದಸ್ಯನ ಆಡಿಯೋ ಕ್ಲಿಪ್ ಬಗ್ಗೆ ತನಿಖೆ ನಡೆಸಲು ಪಿಣರಾಯಿ ವಿಜಯನ್ ಸರ್ಕಾರ ‘ವಿಶೇಷ ತನಿಖಾ ತಂಡ’ (ಎಸ್ಐಟಿ) ನಡೆಸಲಿದೆ. ಬಾರ್ ಮಾಲೀಕರಲ್ಲಿ ಯಾರಾದರೂ ನಿಧಿ ಸಂಗ್ರಹಣೆ ಮಾಡಿದ್ದಾರಾ? ಮಾಡಿದ್ದರೆ ಅದರ ರೂವಾರಿ ಯಾರು ಎಂಬ ಬಗ್ಗೆ ಎಸ್ಐಟಿ ತನಿಖೆ ನಡೆಸಲಿದೆ.