ಸಾರಾಂಶ
ನವದೆಹಲಿ: ‘ಎನ್ಡಿಎ ವಿರುದ್ಧ ರಚನೆಯಾದ ಇಂಡಿ ಕೂಟದಲ್ಲಿ ಮೊದಲಿನಷ್ಟು ಮೈತ್ರಿ ಉಳಿದಿದೆಯೋ ಇಲ್ಲವೋ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಜೆಪಿಯ ಸಧೃಡ ಸಂಘಟನೆಯನ್ನು ಪ್ರಶಂಸಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಮೃತ್ಯುಂಜಯ್ ಸಿಂಗ್ ಯಾದವ್ ಮತ್ತು ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದಂಬರಂ ‘ಇಂಡಿ ಕೂಟದ ಭವಿಷ್ಯ ಉಜ್ವಲವಾಗಿಲ್ಲ. ನನ್ನ ಅನುಭವ ಮತ್ತು ಓದಿದ ಇತಿಹಾಸದ ಪ್ರಕಾರ, ಯಾವುದೇ ರಾಜಕೀಯ ಪಕ್ಷವು ಬಿಜೆಪಿಯಷ್ಟು ಬಲಿಷ್ಠವಾಗಿ ಸಂಘಟಿತವಾಗಿಲ್ಲ’ ಎಂದಿದ್ದಾರೆ. ಇದೇ ವೇಳೆ, ‘ಇಂಡಿ ಕೂಟಕ್ಕೆ ಮತ್ತೆ ಜೀವ ಮತ್ತು ಶಕ್ತಿ ತುಂಬಬಹುದು. ಇನ್ನೂ ಕಾಲ ಮಿಂಚಿಲ್ಲ’ ಎಂಬ ಆಶಾದಾಯಕ ಮಾತುಗಳನ್ನೂ ಆಡಿದ್ದಾರೆ. ಅಂತೆಯೇ, 2029ರ ಚುನಾವಣೆಯನ್ನು ದೇಶದ ಪ್ರಜಾಪ್ರಭುತ್ವದ ಮಹಾ ತಿರುವು ಎಂದು ಕರೆದಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ:
ಚಿದಂಬರಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ‘ಕಾಂಗ್ರೆಸ್ಗೆ ಭವಿಷ್ಯವಿಲ್ಲ ಎಂಬುದು ರಾಹುಲ್ ಗಾಂಧಿಯವರ ಆಪ್ತರಿಗೂ ಗೊತ್ತು’ ಎಂದು ಕಾಲೆಳೆದಿದ್ದಾರೆ.