ಸಾರಾಂಶ
ನವದೆಹಲಿ: ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲು ದಿನಗಣನೆ ಆರಂಭವಾಗಿರುವ ನಡುವೆಯೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಗೆ ಅಂತಿಮ ರೂಪ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಸಭೆ ನಡೆಸುತ್ತಿರುವ ಮಾಜಿ ಸಚಿವ ಚಿದಂಬರಂ ನೇತೃತ್ವದ ಸಮಿತಿ ಸೋಮವಾರ ಕೂಡಾ ವರದಿ ಕುರಿತು ಸಭೆ ನಡೆಸಿತ್ತು.
ಅದರ ಮುಂದುವರೆದ ಭಾಗವಾಗಿ ಮಂಗಳವಾರ ಕೂಡಾ ಪ್ರಣಾಳಿಕೆ ಸಮಿತಿಯ ಸದಸ್ಯರು ಸಭೆ ನಡೆಸಿ ವರದಿಗೆ ಅಂತಿಮ ರೂಪ ನೀಡಿದ್ದಾರೆ. ಶೀಘ್ರವೇ ಇದನ್ನು ಪಕ್ಷದ ಹಿರಿಯ ನಾಯಕರಿಗೆ ಸಲ್ಲಿಸಲಾಗುವುದು. `ಬಳಿಕ ಅದನ್ನು ಸಿಡಬ್ಲ್ಯುಸಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎನ್ನಲಾಗಿದೆ.
ಪ್ರಣಾಳಿಕೆಯಲ್ಲಿ ಏನೇನಿರಲಿದೆ?
1. ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದ ನ್ಯಾಯದ 5 ಸ್ತಂಭಗಳನ್ನು ಆಧರಿಸಿ ಪ್ರಣಾಳಿಕೆ ಸಿದ್ಧ.
2. ಉದ್ಯೋಗವೂ ಹಕ್ಕು ಎಂಬ ಭರವಸೆ. ನಿರುದ್ಯೋಗಿಗಳಿಗೆ ಅಪ್ರೆಂಟಿಸ್ಶಿಪ್ ಘೋಷಣೆ.
3. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡುವ ಅಂಶ ಪ್ರಸ್ತಾಪ ಸಾಧ್ಯತೆ.
4. ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ.
5. ದೇಶವ್ಯಾಪಿ ಜಾತಿ ಗಣತಿ, ಅದರ ಆಧಾರದಲ್ಲಿ ಯೋಜನೆ ಜಾರಿ ಮಾಡುವ ಭರವಸೆ.
ಕರ್ನಾಟಕ ಮಾದರಿ ಉಚಿತ ಸ್ಕೀಂ ಘೋಷಣೆ?
ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಮೊದಲ ಬಾರಿ ಜಾರಿಗೊಳಿಸಿ ಫಲಕೊಟ್ಟ ಉಚಿತ ಸ್ಕೀಂಗಳು, ದೆಹಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಸ್ಥಾನ ಪಡೆಯುವ ಸಾಧ್ಯತೆ.
ಸಮಾಜದ ವಿವಿಧ ವಲಯಗಳಿಗೆ ನಾನಾ ರೀತಿಯ ಉಚಿತ ಸ್ಕೀಂಗಳನ್ನು ಪಕ್ಷ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.