ಸಾರಾಂಶ
ನ್ಯೂಯಾರ್ಕ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಯಾನಿಗಳು ಜು.10ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ. ಆದರೆ ಮರಳುವ ಸಮಯವು ಭೂಮಿಯಲ್ಲಿನ ಹವಾಮಾನ ಪರಿಸ್ಥಿತಿಯ ಮೇಲೆಯೂ ಅವಲಂಬಿತವಾಗಿರುತ್ತದೆ.
ನಾಲ್ವರನ್ನೂ ಹೊತ್ತು ತೆರಳಿದ್ದ ಫಾಲ್ಕನ್-9 ರಾಕೆಟ್ನ ಡ್ರ್ಯಾಗನ್ ಕ್ಯಾಪ್ಸ್ಯುಲ್ ಐಎಸ್ಎಸ್ನಲ್ಲಿಯೇ ಉಳಿದುಕೊಂಡಿದೆ. ಇದು ನಾಲ್ವರನ್ನೂ ಹೊತ್ತು ಮರಳಿ ಭೂಮಿಯತ್ತ ಪ್ರಯಾಣ ಬೆಳೆಸಲಿದೆ. ಈ ನಾಲ್ವರು ಪೈಕಿ ಶುಕ್ಲಾ ಸೇರಿದಂತೆ ಮೂವರು ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳುವ ಮೂಲಕ ಹೊಸ ಇತಿಹಾಸ ರಚಿಸಿದ್ದರು. 14 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇದ್ದ ನಾಲ್ವರೂ ಹಲವು ಯಶಸ್ವಿ ಪ್ರಯೋಗಗಳನ್ನು ನಡೆಸಿದ್ದು, ಇವುಗಳ ಫಲಿತಾಂಶ ಮುಂಬರುವ ದಿನಗಳಲ್ಲಿ ಬಾಹ್ಯಾಕಾಶಕ್ಕೆ ತೆರಳಲಿರುವವರಿಗೆ ಸೇರಿದಂತೆ ಮನುಕುಲಕ್ಕೆ ಹಲವು ರೀತಿಯಲ್ಲಿ ನೆರವಾಗುವ ನಿರೀಕ್ಷೆ ಇದೆ.
ನೀವೂ ಚಂದ್ರನ ಮೇಲೆ ನಡೆದಾಡಿ: ವಿದ್ಯಾರ್ಥಿಗಳ ಜತೆ ಶುಕ್ಲಾ ಸಂವಾದ
ಶಿಲ್ಲಾಂಗ್: ಆಕ್ಸಿಯಂ - 4 ಮಿಷನ್ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಮಂಗಳವಾರ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ್ದಾರೆ. ಈ ವೇಳೆ ‘ನೀವೂ ಗಗನಯಾತ್ರಿಗಳಾಗಬಹುದು, ಚಂದ್ರನ ಮೇಲೆ ನಡೆಯಬಹುದು’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಮೇಘಾಲಯದ ಶಿಲ್ಲಾಂಗ್ನಲ್ಲಿರುವ ಇಸ್ರೋದ ಈಶಾನ್ಯ ಬಾಹ್ಯಾಕಾಶ ಅನ್ವಯಿಕ ಕೇಂದ್ರ (ಎನ್ಇಎಸ್ಸಿ)ದಲ್ಲಿ ವಿದ್ಯಾರ್ಥಿಗಳ ಜೊತೆಗೆ ಹ್ಯಾಮ್ ರೇಡಿಯೋ ಮೂಲಕ ಸಂವಾದ ನಡೆಸಿದ ಶುಕ್ಲಾ, ‘ನಾನು ಹಿಂತಿರುಗುತ್ತೇನೆ. ನಿಮಗೆ ಮಾರ್ಗದರ್ಶನ ನೀಡುತ್ತೇನೆ. ಕಷ್ಟಪಟ್ಟು ಕುತೂಹಲದಿಂಂದ ಕೆಲಸ ಮಾಡಿದರೆ ನೀವು ಭವಿಷ್ಯದ ಗಗನಯಾತ್ರಿಗಳಾಗಬಹುದು. ನಿಮ್ಮಲ್ಲಿ ಯಾರಾದರೂ ಚಂದ್ರನ ಮೇಲೆ ನಡೆಯಬಹುದು’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.