ಏರಿರುವ ಮೋದಿ ವರ್ಚಸ್ಸು ಇಳಿಸಬೇಕು: ರೈತ ನಾಯಕನ ವಿವಾದಿತ ಹೇಳಿಕೆ

| Published : Feb 16 2024, 01:47 AM IST / Updated: Feb 16 2024, 08:32 AM IST

ಸಾರಾಂಶ

‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ರೈತ ನಾಯಕ ದಲ್ಲೇವಾಲ್‌ ಮೋದಿ ವರ್ಚಸ್ಸು ಇಳಿಸುವ ಸಲುವಾಗಿ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ರೈತ ಹೋರಾಟದ ಬಣ್ಣ ಬಯಲು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಚಂಡೀಗಢ: ’ಈಗ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಉತ್ತುಂಗದಲ್ಲಿದೆ. ನಮಗೆ ಕಡಿಮೆ ಸಮಯವಿದೆ. 

ಆದಷ್ಟು ಬೇಗ ರೈತ ಪ್ರತಿಭಟನೆ ಮೂಲಕ ಮೋದಿ ವರ್ಚಸ್ಸನ್ನು ಕುಗ್ಗಿಸಬೇಕು’ ಎಂದು ರೈತರ ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿನ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ವೈರಲ್‌ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಬಿಜೆಪಿ, ‘ಇದರಿಂದ ರೈತ ಹೋರಾಟದ ಬಣ್ಣ ಬಯಲಾಗಿದೆ’ ಎಂದಿದೆ.

ದಲ್ಲೆವಾಲ್‌ ಹೇಳಿದ್ದೇನು?
ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾನೂನು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಂಜಾಬ್‌ ಮತ್ತು ಹರ್ಯಾಣದ 200 ರೈತ ಸಂಘಟನೆಗಳು ದಿಲ್ಲಿ ಚಲೋ ನಡೆಸುತ್ತಿವೆ. 

ಈ ವೇಳೆ ಪಂಜಾಬ್‌-ಹರ್ಯಾಣದ ಶಂಭು ಗಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರೈತ ನಾಯಕ ದಲ್ಲೇವಾಲ್‌, ‘ಮೋದಿ ಜನಪ್ರಿಯತೆ ಹೆಚ್ಚಿದೆ. ರಾಮ ಮಂದಿರ ನಿರ್ಮಾಣದಿಂದಾಗಿ ಅವರ ವರ್ಚಸ್ಸಿನ ಗ್ರಾಫ್‌ ಉನ್ನತ ಮಟ್ಟದಲ್ಲಿದೆ. 

ನಮಗೆ ಸಮಯ ಕಡಿಮೆ ಇದೆ (2024 ಲೋಕಸಭೆ ಚುನಾವಣೆ ಮುನ್ನ). ನಾವು ಮೋದಿಯ ಗ್ರಾಫ್‌ ಅನ್ನು ಕೆಳಗೆ ತರಬೇಕಾಗಿದೆ’ ಎಂದರು.

ಇದಕ್ಕೆ ಕಿಡಿಕಾರಿರುವ ಬಿಜೆಪಿ ನಾಯಕ, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ‘ಇದರಿಂದ ಅವರು (ರೈತರು) ಎಲ್ಲಿಂದಲೋ ಅಥವಾ ಬೇರೆಡೆಯಿಂದ ಬೆಂಬಲ ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. 

ಪಂಜಾಬ್ ಸರ್ಕಾರ ಅವರನ್ನು ತಡೆಯಬಹುದಿತ್ತು, ಆದರೆ ತಡೆದಿಲ್ಲ ಇದು ಸ್ವಲ್ಪ ತಿಳುವಳಿಕೆ ಇರಬೇಕು ಎಂದು ತೋರಿಸುತ್ತದೆ. ದೆಹಲಿ ಆಪ್‌ ಸರ್ಕಾರ ಸರ್ಕಾರವು ರೈತರ ಚಳವಳಿಗೆ ಬೆಂಬಲ ನೀಡಿದೆ’ ಎಂದಿದ್ದಾರೆ.