ಸಾರಾಂಶ
ಸಿದ್ದೇಶ್ವರ ದೇವಾಲಯ ಸ್ಥಾಪನೆ ಮಾಡಿ, ಎಂಟು ದಿಕ್ಕುಗಳಲ್ಲಿ ಲಿಂಗಮುದ್ರೆ ಕಲ್ಲುಗಳನ್ನು ನೆಟ್ಟು ಲೋಕಾರ್ಪಣೆ ಮಾಡಲಾಗಿದೆ. ಶವಸಂಸ್ಕಾರಕ್ಕಾಗಿ ಸಮಾಜದವರು ಈ ರುದ್ರಭೂಮಿಯನ್ನು ಬಳಸಿಕೊಳ್ಳಬಹುದು ಎಂದು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು.
ತುಮಕೂರು : ನಗರದ ಗಂಗಸಂದ್ರದಲ್ಲಿ 6 ಎಕರೆ ಜಾಗದಲ್ಲಿ ನೂತನವಾಗಿ ಸುಸಜ್ಜಿತವಾಗಿ ರುದ್ರವನವನ್ನು ವೀರಶೈವ ಸಮಾಜದಿಂದ ನಿರ್ಮಾಣ ಮಾಡಿದ್ದು, ಅಲ್ಲಿ ಸಿದ್ದೇಶ್ವರ ದೇವಾಲಯ ಸ್ಥಾಪನೆ ಮಾಡಿ, ಎಂಟು ದಿಕ್ಕುಗಳಲ್ಲಿ ಲಿಂಗಮುದ್ರೆ ಕಲ್ಲುಗಳನ್ನು ನೆಟ್ಟು ಲೋಕಾರ್ಪಣೆ ಮಾಡಲಾಗಿದೆ.
ಶವಸಂಸ್ಕಾರಕ್ಕಾಗಿ ಸಮಾಜದವರು ಈ ರುದ್ರಭೂಮಿಯನ್ನು ಬಳಸಿಕೊಳ್ಳಬಹುದು ಎಂದು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು. ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ನಡೆದ ಸಮಾಜ ಸೇವಾ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬನಶಂಕರಿಯ ರುದ್ರಭೂಮಿಯಲ್ಲಿ 1960 ರಿಂದ ಶವಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿ ಜಾಗದ ಕೊರತೆ ಎದುರಾಗಿದೆ. ಹೀಗಾಗಿ ಗಂಗಸಂದ್ರದ ರುದ್ರವನ ನಿರ್ಮಾಣ ಮಾಡಿ ಅಂತ್ಯಸಂಸ್ಕಾರ ಕಾರ್ಯಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದುವರೆಗೆ ಸಮಾಜದಿಂದ ಶವಸಂಸ್ಕಾರಕ್ಕೆ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಮಾಡಲಾಗುತ್ತಿತ್ತು, ಅದರ ಖರ್ಚನ್ನು ಸಮಾಜ ಭರಿಸುತ್ತಿತ್ತು. ಸಭೆಯ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಉಚಿತ ಸೇವೆ ಮುಂದುವರೆಸುವುದಾಗಿ ಹೇಳಿದ ಅವರು, ಶಕ್ತಿ ಇರುವವರು ರುದ್ರಭೂಮಿಯ ಅಭಿವೃದ್ಧಿಗೆ ದೇಣಿಗೆ ನೀಡಿ ರಶೀತಿ ಪಡೆಯಬಹುದು ಎಂದರು.
ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯು ಕಳೆದ ಐದು ದಶಕಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ. ಹಿಂದಿನ ಹಲವು ಮಹನೀಯರು ಈ ಕಾರ್ಯದಲ್ಲಿ ತೊಡಗಿ ಪ್ರೇರಣೆಯಾಗಿದ್ದಾರೆ. ಅದೇ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿ ತಮ್ಮ ಆಡಳಿತ ಅವಧಿಯಲ್ಲಿ ಮಾಡಿರುವ ಸೇವಾ ಕಾರ್ಯಗಳನ್ನು ಸಭೆಗೆ ವಿವರಿಸಿದರು.
ಸಮಿತಿಯ ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ ಮಾತನಾಡಿ, ದಾಸೋಹಕ್ಕೆ ಹೆಸರಾದ ವೀರಶೈವ ಸಮಾಜ ಕೊರೊನಾ ಲಾಕ್ಡೌನ್ ಕಾಲದಲ್ಲಿ ನಗರದಲ್ಲಿ ವಾಸಿಸುವ ಕಡುಬಡವರಿಗೆ, ಕೂಲಿಕಾರ್ಮಿಕರಿಗೆ, ನಿರ್ಗತಿಕರಿಗೆ, ಹೊರ ರಾಜ್ಯಗಳಿಂದ ಬಂದ ಕಾರ್ಮಿಕರಿಗೆ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ ಹಾಗೂ ನಿರ್ದೇಶಕರು ದಾಸೋಹ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿ ಜಿಲ್ಲಾಡಳಿತ ಹಾಗೂ ಸರ್ಕಾರದ ಪ್ರಶಂಸೆಗೆ ಪಾತ್ರರಾಗಿದ್ದರು.
ಇದಲ್ಲದೆ ಸಮಾಜದಿಂದ ನಿರ್ವಹಿಸಿದ ವಿವಿಧ ಧಾರ್ಮಿಕ, ಸೇವಾ ಕಾರ್ಯಗಳು,ಸಮಾಜದ ಅಂಗಸಂಸ್ಥೆಗಳ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. 2024 - 25ನೇ ಸಾಲಿನ ಆಯ-ವ್ಯಯ ಮಂಡನೆ ಮಾಡಿ ಸರ್ವಸದ್ಯರ ಅನುಮೋದನೆ ಪಡೆಯಲಾಯಿತು.ಮಾಜಿ ಸಚಿವ ಸೊಗಡು ಶಿವಣ್ಣ, ಸಮಾಜ ಸಮಿತಿಯ ಮಾಜಿ ಅಧ್ಯಕ್ಷ ಸಿ.ವಿ.ಮಹದೇವಯ್ಯ, ಟಿ.ಕೆನಂಜುಂಡಪ್ಪ ಅವರು ಸರ್ವಸದಸ್ಯರ ಸಭೆ ಉದ್ಘಾಟಿಸಿ ಚರ್ಚೆಯಲ್ಲಿ ಭಾಗವಹಿಸಿದ್ದರು.
ವೀರಶೈವ ಸಮಾಜ ಸೇವಾ ಸಮಿತಿಯ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಜಂಟಿ ಕಾರ್ಯದರ್ಶಿ ಟಿ.ಎನ್.ರುದ್ರೇಶ್, ಖಜಾಂಚಿ ಶಿವಲಿಂಗಮ್ಮ, ಆಡಳಿತಾಧಿಕಾರಿ ಎ.ಎಸ್.ರುದ್ರಕುಮಾರ್ ಆರಾಧ್ಯ, ನಿರ್ದೇಶಕ ಪಿ.ರವಿಶಂಕರ್, ಮೋಹನ್ಕುಮಾರ್ ಪಟೇಲ್, ಡಿ.ಆರ್.ಮಲ್ಲೇಶಯ್ಯ, ಕೆ.ಜಿ.ಶಿವಕುಮಾರ್, ಟಿ.ಸಿ.ತಾಂಡವಮೂರ್ತಿ, ಬಿ.ಉಮೇಶ್, ಟಿ.ಆರ್.ನಟರಾಜು, ಆರ್.ಮಂಜುನಾಥ್, ಕೆ.ಎಸ್.ವಿಶ್ವನಾಥ್, ಕೆ.ಎಸ್.ನಾಗರಾಜು, ಹೆಚ್.ಟಿ.ನಾಗರಾಜು, ಟಿ.ಆರ್.ಯೋಗೀಶ್, ಸುಮಾ ಪ್ರಸನ್ನಕುಮಾರ್ ಸೇರಿದಂತೆ ಸಮಾಜದ ಮುಖಂಡರಾದ ಕೋರಿ ಮಂಜುನಾಥ್, ಬಿ.ಎಸ್.ಮಂಜುನಾಥ್, ಟಿ.ಸಿ ಓಹಿಲೇಶ್ವರ್ ಅಲ್ಲದೆ ವೀರಶೈವ ಸಮಾಜ ಸೇವಾ ಸಮಿತಿಯ ವಿವಿಧ ಅಂಗ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.