ಸಾರಾಂಶ
ನವದೆಹಲಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳ ಪೈಕಿ ಒಂದಾದ ವಿಸ್ತಾರ ಸೋಮವಾರ ಮತ್ತು ಮಂಗಳವಾರ ಏಕಾಏಕಿ ನೂರಾರು ವಿಮಾನಗಳ ಸಂಚಾರ ರದ್ದುಗೊಳಿಸಿದ ಪರಿಣಾಮ ಬೆಂಗಳೂರು ಸೇರಿ ದೇಶವ್ಯಾಪಿ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದು ಮತ್ತು ಸಂಚಾರ ವ್ಯತ್ಯಯದ ಕುರಿತು ದೈನಂದಿನ ವರದಿ ಸಲ್ಲಿಸುವಂತೆ ಸಂಸ್ಥೆಗೆ ನಾಗರಿಕ ವಿಮಾನಯಾನ ಪ್ರಾಧಿಕಾರ ಸೂಚಿಸಿದೆ.
ಬಿಕ್ಕಟ್ಟು ಏಕೆ?: ವಿಸ್ತಾರ ಏರ್ಲೈನ್ಸ್ ಅನ್ನು ತನ್ನದೇ ಆದ ಏರ್ಇಂಡಿಯಾದಲ್ಲಿ ವಿಲೀನ ಮಾಡಲು ಟಾಟಾ ಸಮೂಹ ನಿರ್ಧರಿಸಿದೆ. ಅದಕ್ಕೂ ಮುನ್ನ ತನ್ನ ಸಮೂಹದಲ್ಲಿನ ಇತರೆ ಪೈಲಟ್ಗಳ ವೇತನ ಮತ್ತು ಭತ್ಯೆಯನ್ನು ವಿಸ್ತಾರಕ್ಕೆ ಜಾರಿಗೊಳಿಸಲು ಮುಂದಾಗಿದೆ. ಅದರೆ ಇದರಿಂದ ತಮಗೆ ಭಾರೀ ನಷ್ಟವಾಗಲಿದೆ ಎಂಬ ಕಾರಣಕ್ಕೆ ಏಕಾಏಕಿ ಪೈಲಟ್ಗಳು ಅನಾರೋಗ್ಯ ರಜೆ ಪಡೆದುಕೊಂಡಿದ್ದಾರೆ.
ಹಲವು ಹಿರಿಯ ಉದ್ಯೋಗಿಗಳು ಕೂಡಾ ಇದೇ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಹೀಗಾಗಿ ಅಗತ್ಯ ಸಿಬ್ಬಂದಿ ಇಲ್ಲದೇ ಸೋಮವಾರ 50ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದ್ದರೆ, 150ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.ನ ಈ ಕುರಿತು ಕ್ಷಮೆ ಯಾಚಿಸಿರುವ ಕಂಪನಿ ಕೆಲವು ಸ್ಥಳಗಳಿಗೆ ದೊಡ್ಡ ವಿಮಾನಗಳ ನಿಯೋಜನೆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ, ಕೆಲವೆಡೆ ಬೇರೆ ವಿಮಾನಗಳ ಮೂಲಕ ಸಂಚಾರದ ವ್ಯವಸ್ಥೆ ನೀಡಲಾಗಿದೆ. ಜೊತೆಗೆ ಕೆಲವು ಕಡೆ ಹಣ ಮರಳಿಸಲಾಗಿದೆ ಎಂದು ಹೇಳಿದೆ.