ಸಾರಾಂಶ
ನವದೆಹಲಿ: ಮದ್ಯ ಲೈಸೆನ್ಸ್ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸಿದ್ದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ.
ಈ ಹಿಂದೆ ಬಂಧನ ಪ್ರಶ್ನಿಸಿದ್ದ ಕೇಜ್ರಿವಾಲ್ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಹಲವು ಬಾರಿ ಸಮನ್ಸ್ ನೀಡಿದರೂ ಅವರು ತನಿಖೆಗೆ ಹಾಜರಾಗದ ಕಾರಣ ಈ ಕ್ರಮ ಅಗತ್ಯ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ನಿಗದಿಗಿಂತ ಹೆಚ್ಚು ಶುಲ್ಕ: ₹ 65 ಕೋಟಿ ಮರಳಿಸಲು 10 ಶಾಲೆಗಳಿಗೆ ಆದೇಶ
ಜಬಲ್ಪುರ್: ಕಾನೂನುಬಾಹಿರವಾಗಿ ಟ್ಯೂಷನ್ ಶುಲ್ಕ ಹೆಚ್ಚಿಸಿ 81,000 ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗಿದ್ದ ರು. 65 ಕೋಟಿಯನ್ನು ಮರುಪಾವತಿಸುವಂತೆ ಜಬಲ್ಪುರದ ಅಧಿಕಾರಿಗಳು ಹತ್ತು ಶಾಲೆಗಳಿಗೆ ಗುರುವಾರ ಆದೇಶಿಸಿದ್ದಾರೆ.
ಮಧ್ಯಪ್ರದೇಶ ನಿಜಿ ವಿದ್ಯಾಲಯ ಅಧಿನಿಯಮ 2017ರ ಅಡಿಯಲ್ಲಿ ರಚಿಸಲಾದ ಜಿಲ್ಲಾ ಮಟ್ಟದ ಸಮಿತಿ ಶಾಲೆಗಳ ಖಾತೆಗಳನ್ನು ಪರಿಶೀಲಿಸಿದಾಗ 2018-19 ಹಾಗೂ 2024-25 ನಡುವೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಘನಶ್ಯಾಮ ಸೋನಿ ಹೇಳಿದ್ದಾರೆ. ಪಠ್ಯಪುಸ್ತಕಗಳ ದರ ಏರಿಸಿದ್ದ ಅಂಗಡಿ ಮಾಲೀಕರು ಹಾಗೂ ಶಾಲೆಯ ಪದಾಧಿಕಾರಿಗಳ ವಿರುದ್ಧ ಮೇ.27ರಂದು 11 ಎಫ್ಐಆರ್ಗಳು ದಾಖಲಾಗಿದ್ದವು.
ಲೈಂಗಿಕ ಕಿರುಕುಳ ಆರೋಪ: ಯೋಧನಿಗೆ ಸ್ಪೈಸ್ಜೆಟ್ ಸಿಬ್ಬಂದಿ ಕಪಾಳ ಮೋಕ್ಷ
ಜೈಪುರ: ಸಿಆರ್ಪಿಎಫ್ ಯೋಧನಿಗೆ ಸ್ಪೈಸ್ಜೆಟ್ ವಿಮಾನದ ಮಹಿಳಾ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ಇಲ್ಲಿ ನಡೆದಿದೆ. ಈ ಸಂಬಂಧ ಮಹಿಳಾ ಸಿಬ್ಬಂದಿ ಅನುರಾಧಾ ರಾಣಿಯನ್ನು ಬಂಧಿಸಲಾಗಿದೆ. ಈ ನಡುವೆ ಭದ್ರತಾ ತಪಾಸಣೆ ವೇಳೆ ಯೋಧ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅನುರಾಧಾ ಆರೋಪಿಸಿದ್ದಾರೆ. ಸ್ಪೈಸ್ಜೆಟ್ ಸಂಸ್ಥೆ ಕೂಡಾ ಕಿರುಕುಳ ನೀಡಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಪೊಲೀಸ್ ಮೊರೆ ಹೋಗಿದೆ.