ಸಾರಾಂಶ
‘ಭಾರತ ಸರ್ಕಾರವು ವಿದೇಶಗಳಲ್ಲಿ ಅಡಗಿರುವ ವಾಂಟೆಡ್ಗಳನ್ನು ಕರೆತರಲು ಗಡೀಪಾರು ಬಯಸುತ್ತಿದೆ. ಆದರೆ ಭಾರತದಲ್ಲಿ ಜೈಲುಗಳ ಸ್ಥಿತಿಯು ಸುಧಾರಿಸುವ ತನಕ ಗಡೀಪಾರು ಪ್ರಕ್ರಿಯೆ ಕಷ್ಟವಿದೆ’ ಎಂದು ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿ ನ್ಯಾ। ಮದನ್ ಬಿ. ಲೋಕೂರ್ ಹೇಳಿದ್ದಾರೆ.
ನವದೆಹಲಿ: ‘ಭಾರತ ಸರ್ಕಾರವು ವಿದೇಶಗಳಲ್ಲಿ ಅಡಗಿರುವ ವಾಂಟೆಡ್ಗಳನ್ನು ಕರೆತರಲು ಗಡೀಪಾರು ಬಯಸುತ್ತಿದೆ. ಆದರೆ ಭಾರತದಲ್ಲಿ ಜೈಲುಗಳ ಸ್ಥಿತಿಯು ಸುಧಾರಿಸುವ ತನಕ ಗಡೀಪಾರು ಪ್ರಕ್ರಿಯೆ ಕಷ್ಟವಿದೆ’ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮತ್ತು ಹಾಲೀ ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿ ಮುರ್ಖಯಸ್ಥ ನ್ಯಾ। ಮದನ್ ಬಿ. ಲೋಕೂರ್ ಹೇಳಿದ್ದಾರೆ.
ಭಾರತ ನ್ಯಾಯಾಂಗ ವರದಿ 2025ರ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ।ಲೋಕೂರ್, ಇತ್ತೀಚೆಗೆ ಬ್ರಿಟನ್ನ ಕೋರ್ಟ್ ಭಾರತಕ್ಕೆ ಬೇಕಿರುವ ವಂಚಕ, ಸಂಜಯ್ ಭಂಡಾರಿಯನ್ನು ಗಡೀಪಾರು ಮಾಡಲು ಹಿಂದೇಟು ಹಾಕಿತು. ಅದಕ್ಕೆ ಕಾರಣವಾಗಿ ಇಲ್ಲಿನ ದೆಹಲಿಯ ತಿಹಾರ್ ಜೈಲಿನಲ್ಲಿ ಅಭದ್ರತೆ ಮತ್ತು ಕಳಪೆ ಸ್ಥಿತಿಯನ್ನು ಉಲ್ಲೇಖಿಸಿತು ಎಂದರು.
ತಿಹಾರ್ ಜೈಲಿನಲ್ಲಿ ಸಿಸಿಟೀವಿ ಕ್ಯಾಮೆರಾಗಳಿದ್ದರೂ ಅದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಜೈಲಿನಲ್ಲಿ ಕೊಲೆ ನಡೆದ ದೃಶ್ಯಗಳು ಸೆರೆಯಾದರೂ ಯಾವುದೇ ಕ್ರಮಗಳಿಲ್ಲ. ಅಲ್ಲಿನ ಭ್ರಷ್ಟಾಚಾರ, ನ್ಯಾಯದಾನಗಳು ವಿದೇಶಗಳಲ್ಲಿ ಗಡೀಪಾರು ಪ್ರಕ್ರಿಯೆಯನ್ನು ತಡ ಮಾಡುತ್ತದೆ. ಹೀಗಾಗಿ ಭಾರತವು ತನ್ನಲ್ಲಿನ ಜೈಲುಗಳ ಸ್ಥಿತಿ ಸುಧಾರಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.