ಕರ್ನಾಟಕದ ಬಳಿ ಈಗ ದುಡ್ಡೇ ಇಲ್ಲ - ಉಚಿತ ಯೋಜನೆಗಳಿಂದ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ: ನಿರ್ಮಲಾ

| N/A | Published : Feb 03 2025, 05:28 AM IST

Nirmala Sitharaman

ಸಾರಾಂಶ

ಕಾಂಗ್ರೆಸ್‌ ಆಡಳಿತದ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಜಾರಿಗೆ ತಂದಿರುವ ಉಚಿತ ಯೋಜನೆಗಳಿಗೆ ಹಣ ನೀಡಲು ಅಲ್ಲಿನ ಸರ್ಕಾರಗಳ ಬಳಿ ಹಣವಿಲ್ಲ. ಅವುಗಳು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಟೀಕಿಸಿದ್ದಾರೆ.

ನವದೆಹಲಿ : ‘ಕಾಂಗ್ರೆಸ್‌ ಆಡಳಿತದ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಜಾರಿಗೆ ತಂದಿರುವ ಉಚಿತ ಯೋಜನೆಗಳಿಗೆ ಹಣ ನೀಡಲು ಅಲ್ಲಿನ ಸರ್ಕಾರಗಳ ಬಳಿ ಹಣವಿಲ್ಲ. ಅವುಗಳು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಟೀಕಿಸಿದ್ದಾರೆ.

 ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ದೆಹಲಿಯಲ್ಲಿ ಬಿಜೆಪಿ ಕೂಡ ಹಲವು ಉಚಿತಗಳನ್ನು ಘೋಷಿಸಿರುವ ಹೊತ್ತಿನಲ್ಲೇ ಸುದ್ದಿಸಂಸ್ಥೆ ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ನಿರ್ಮಲಾ, ‘ಇಂತಹ ಉಚಿತಗಳ ಘೋಷಣೆ ಮಾಡುವ ಮುನ್ನ ರಾಜ್ಯದ ಆರ್ಥಿಕ ಸಾಮರ್ಥ್ಯದ ಕುರಿತು ಅಧ್ಯಯನ ಮಾಡುವುದು ಅಗತ್ಯ. ಇಂತಹ ತಯಾರಿಯನ್ನು ಬಿಜೆಪಿ ಆಡಳಿತ ಇರುವ ರಾಜ್ಯಗಳು ಮಾಡಿಯೇ ಉಚಿತ ಯೋಜನೆಗಳನ್ನು ಘೋಷಿಸುತ್ತವೆ’ ಎಂದು ಹೇಳಿದ್ದಾರೆ.

‘ಬಿಜೆಪಿ ಆಡಳಿತ ಇರುವ ಯಾವ ರಾಜ್ಯವನ್ನು ಬೇಕಾದರೂ ನೋಡಿ. ಚುನಾವಣೆ ಸಮಯದಲ್ಲಿ ಅವುಗಳು ಮಾಡುವ ಘೋಷಣೆಗಳು ಬಜೆಟ್‌ಗೆ ಅನುಗುಣವಾಗಿರುತ್ತವೆ. ಆದರೆ ಹಿಮಾಚಲ ಹಾಗೂ ಕರ್ನಾಟಕ ರಾಜ್ಯಗಳು ದೊಡ್ಡದೊಡ್ಡ ಭರವಸೆಗಳನ್ನು ನೀಡಿ, ಅವುಗಳನ್ನು ಈಡೇರಿಸಲು ಹೆಣಗಾಡುತ್ತಿವೆ. ಆರ್ಥಿಕವಾಗಿ ಸಾಕಷ್ಟು ಉತ್ತಮ ಸ್ಥಿತಿಯಲ್ಲೇ ಇದ್ದ ಕರ್ನಾಟಕ, ಹಿಮಾಚಲದಂಥ ರಾಜ್ಯಗಳು ಈಗ ಹಣಕಾಸಿನ ಸಮಸ್ಯೆ ಎದುರಿಸುತ್ತಿವೆ’ ಎಂದರು.

ಜೊತೆಗೆ, ‘ಒಂದೊಮ್ಮೆ ಈ ಘೋಷಣೆಗಳು ಬಹುಮತದಿಂದಾಗಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದರೂ, ಇಂದಿನ ಪೀಳಿಗೆಯಿಂದ ಹಣ ಪಡೆದು ಮುಂದಿನವರ ಮೇಲೆ ಅದರ ಹೊರೆಯನ್ನು ಹಾಕಿದಂತೆ’ ಎಂದು ಎಚ್ಚರಿಸಿದ್ದಾರೆ.