ಕೋಲ್ಕತಾ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊರಿಸಿ ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಬಿದಾನ್ನಗರ್ ಪೊಲಿಸರು ಬುಧವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಿಜೆಪಿ ಸಭೆಯೊಂದರಲ್ಲಿ ಮಿಥುನ್, ‘2026ರಲ್ಲಿ ಪಶ್ಚಿಮ ಬಂಗಾಳದ ಸಿಂಹಾಸನ ಬಿಜೆಪಿಗೆ ಸೇರಲಿದ್ದು, ಅದನ್ನು ಸಾಧಿಸಲು ಸಾಧ್ಯವಾದುದನ್ನೆಲ್ಲಾ ಮಾಡುತ್ತೇವೆ. ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಬಿಜೆಪಿ ಮತದಾರರಿಗೆ ಯಾರೂ ಬೆದರಿಸಬಾರದು’ ಎಂದು ಟಿಎಂಸಿಗೆ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನು ಸೇಡಿನ ರಾಜಕೀಯ ಎಂದು ಕರೆದಿರುವ ಕೇಂದ್ರ ಸಚಿವ ಸುಕಾಂತ್ ಮಜುಂದಾರ್, ‘ಮಿಥುನ್ ಭಾಷಣದಲ್ಲಿ ಪ್ರಚೋದನಕಾರಿ ಎನಿಸುವಂಥದ್ದು ಏನೂ ಇರಲಿಲ್ಲ. ಇದು ಪೊಲೀಸರನ್ನು ರಾಜಕೀಯ ಅಸ್ತ್ರವಾಗಿ ಬಳಸಿ ಅವರನ್ನು ಬೆದರಿಸುವ ಸಂಚು’ ಎಂದರು.