ಶ್ರೀನಗರ: ಯುದ್ಧದಿಂದಾಗಿ ಅತಂತ್ರರಾಗಿರುವ ಇರಾನಿಗರತ್ತ ಕಾಶ್ಮೀರದ ಬಡ್ಗಾಂ ಮತ್ತು ಬಾರಾಮುಲ್ಲಾ ಜಿಲ್ಲೆಗಳ ನಿವಾಸಿಗಳು ಸಹಾಯಹಸ್ತ ಚಾಚಿದ್ದಾರೆ. ರಮ್ಜಾನ್‌ ಪ್ರಯುಕ್ತ, ಶಿಯಾ ಪ್ರಾಬಲ್ಯವಿರುವ ಈ ಪ್ರದೇಶಗಳಲ್ಲಿ ಕೆಲ ಸ್ವಯಂಸೇವಕರು ಮನೆಮನೆಗೆ ತೆರಳಿ ಹಣ, ಬೆಳ್ಳಿ, ಬಂಗಾರ, ತಾಮ್ರ, ಜಾನುವಾರು ಇತ್ಯಾದಿಗಳನ್ನು ಸಂಗ್ರಹಿಸಿ ದಾನ ಮಾಡಿದ್ದಾರೆ.

ವಿಧವೆಯೊಬ್ಬರು ಪತಿಯ ನೆನಪಿಗೆಂದು 28 ವರ್ಷಗಳಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಚಿನ್ನದ ಸ್ಮರಣಿಕೆಯನ್ನೂ ದಾನವಾಗಿ ನೀಡಿ ಕಣ್ತುಂಬಿಕೊಂಡದ್ದು ಹೃದಯಸ್ಪರ್ಶಿಯಾಗಿತ್ತು. ಮಕ್ಕಳು ಕೂಡ ತಾವು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಉದಾರವಾಗಿ ನೀಡಿದರು.ಇದರ ದೃಶ್ಯಗಳನ್ನು ಭಾರತದಲ್ಲಿರುವ ಇರಾನ್‌ ದೂತಾವಾಸ ಹಂಚಿಕೊಂಡಿದ್ದು, ‘ನಿಮ್ಮ ಮಾನವೀಯ ಬೆಂಬಲ ಮತ್ತು ಹೃತ್ಪೂರ್ವಕ ಒಗ್ಗಟ್ಟಿಗೆ ಧನ್ಯವಾದ. ಈ ದಯೆಯನ್ನು ಎಂದೂ ಮರೆಯುವುದಿಲ್ಲ’ ಎಂದು ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿದೆ.