ಸಾರಾಂಶ
ಲೇಹ್: ಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ಗೆ ರಾಜ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಚಳವಳಿ ಉಗ್ರಸ್ವರೂಪಕ್ಕೆ ತಿರುಗಿದ್ದು, ನೇಪಾಳದ ಜೆನ್-ಝೀ (ಯುವಕರ ಪಡೆ) ಮಾದರಿ ಹೋರಾಟ ನಡೆದಿದೆ. ಬುಧವಾರ ಬೆಳಗ್ಗೆ ಲೇಹ್ನಲ್ಲಿ ಯುವ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆದಿದ್ದು, 4 ಮಂದಿ ಸಾವನ್ನಪ್ಪಿದ್ದು, 70 ಜನ ಗಾಯಗೊಂಡಿದ್ದಾರೆ.
ಲಡಾಖ್ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಸೋನಂ ವಾಂಗ್ಚುಕ್ ಈ ಹೋರಾಟವನ್ನು, ‘ಜೆನ್ ಝೀ’ ಹೋರಾಟ ಎಂದು ಕರೆದಿದ್ದಾರೆ. ಆದರೆ ಹಿಂಸೆಗೆ ಬೇಸತ್ತ ಅವರು 15 ದಿನದಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ ಹಾಗೂ ಶಾಂತಿಗೆ ಆಗ್ರಹಿಸಿದ್ದಾರೆ. ‘ಯುವಕರು ನಿರುದ್ಯೋಗ ಸಮಸ್ಯೆಗೆ ಬೇಸತ್ತು ಹಿಂಸೆಗಿಳಿದಿರಬಹುದು. ಆದರೆ ಹಿಂಸೆಯಿಂದ ಹೋರಾಟ ಹಳಿತಪ್ಪಲಿದೆ’ ಎಂದು ಎಚ್ಚರಿಸಿದ್ದಾರೆ.
ಆಗಿದ್ದೇನು?:
ಲಡಾಖ್ ಅನ್ನು ರಾಜ್ಯವೆಂದು ಗುರುತಿಸಬೇ ಎಂಬ ಆಗ್ರಹದೊಂದಿಗೆ ಲಡಾಖ್ ಬಂದ್ಗೆ ಕರೆ ನೀಡಿದ್ದ ಪ್ರತಿಭಟನಾಕಾರರು, ಬುಧವಾರ ಮಧ್ಯಾಹ್ನ ಹಿಂಸೆಗೆ ಇಳಿದರು. ಲೇಹ್ನ ಬಿಜೆಪಿ ಕಚೇರಿ, ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಪ್ರತಿಯಾಗಿ ಪೊಲೀಸರು ಅಶ್ರುವಾಯು ಮತ್ತು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರು.
ಲಡಾಖ್ ಅನ್ನು ರಾಜ್ಯವಾಗಿಸುವ ಸಂಬಂಧ ಅ.6ರಂದು ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿರುವ ಹೊತ್ತಿನಲ್ಲೇ ಈ ಉದ್ವಿಗ್ನತೆ ಭುಗಿಲೆದ್ದಿದೆ. ಇದೇ ಮೊದಲ ಬಾರಿ ಈ ಚಳವಳಿ ಹಿಂಸಾತ್ಮಕವಾಗಿರುವುದು ಗಮನಾರ್ಹ. 370ನೇ ವಿಧಿ ರದ್ದತಿಯ ಬಳಿಕ 2019ರ ಆಗಸ್ಟ್ನಲ್ಲಿ ಲಡಾಖ್ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿತ್ತು. ಹಿಂಸೆಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ದೂರಿದೆ.
ನೇಪಾಳ ಸೈಡ್ ಎಫೆಕ್ಟ್ । ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ । 4 ಬಲಿ, 30 ಜನರಿಗೆ ಗಾಯ
ಕೇಂದ್ರಾಡಳಿತ ಪ್ರದೇಶದಲ್ಲಿ ಪೊಲೀಸ್ ಠಾಣೆ, ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ಯುವಕರ ಆಕ್ರೋಶ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇ಼ಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಬಳಿಕ ಲಡಾಖ್ಗೆ ಕೇಂದ್ರಾಡಳಿತ ಸ್ಥಾನಮಾನ
ಆದರೆ ತಮಗೂ ಕಾಶ್ಮೀರದ ರೀತಿಯಲ್ಲೇ ಪ್ರತ್ಯೇಕ ರಾಜ್ಯದ ಸ್ಥಾನ ನೀಡಬೇಕೆಂದು ಸ್ಥಳೀಯ ಯುವಸಮುದಾಯದ ಹೋರಾಟ, ಪ್ರತಿಭಟನೆ
ಲೇಹ್ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಠಾಣೆ, ಬಿಜೆಪಿಗೆ ಕಚೇರಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು. ಈ ವೇಳೆ ಲಾಠಿಚಾರ್ಜ್ಗೆ 4 ಬಲಿ