ಪಡಿತರ ಅಂಗಡಿಗಳಲ್ಲಿ ಇನ್ನು ಸಿರಿಧಾನ್ಯ, ಡೈರಿ ಉತ್ಪನ್ನ, ಬೇಳೆ ಕಾಳು ಮಾರಾಟ ಪ್ರಾಯೋಗಿಕ ಯೋಜನೆಗೆ ಚಾಲನೆ

| Published : Aug 21 2024, 12:32 AM IST / Updated: Aug 21 2024, 08:13 AM IST

ಸಾರಾಂಶ

ಪಡಿತರ ಅಂಗಡಿಗಳ ಕಾರ್ಯಕ್ಷಮತೆ ಹಾಗೂ ಪೌಷ್ಟಿಕಾಂಶದ ಲಭ್ಯತೆಯನ್ನು ಹೆಚ್ಚಿಸಲು ಅವುಗಳಲ್ಲಿ ಸಿರಿಧಾನ್ಯ, ಬೇಳೆ ಕಾಳು, ಡೈರಿ ಉತ್ಪನ್ನಗಳನ್ನು ಮಾರುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಹ್ಲಾದ್‌ ಜೋಶಿ ಮಂಗಳವಾರ ಇಲ್ಲಿ ಚಾಲನೆ ನೀಡಿದ್ದಾರೆ.

ನವದೆಹಲಿ: ಪಡಿತರ ಅಂಗಡಿಗಳ ಕಾರ್ಯಕ್ಷಮತೆ ಹಾಗೂ ಪೌಷ್ಟಿಕಾಂಶದ ಲಭ್ಯತೆಯನ್ನು ಹೆಚ್ಚಿಸಲು ಅವುಗಳಲ್ಲಿ ಸಿರಿಧಾನ್ಯ, ಬೇಳೆ ಕಾಳು, ಡೈರಿ ಉತ್ಪನ್ನಗಳನ್ನು ಮಾರುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಹ್ಲಾದ್‌ ಜೋಶಿ ಮಂಗಳವಾರ ಇಲ್ಲಿ ಚಾಲನೆ ನೀಡಿದ್ದಾರೆ.

ಇದರ ಅಡಿಯಲ್ಲಿ ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ 60 ಪಡಿತರ ಅಂಗಡಿಗಳನ್ನು ‘ಜನ ಪೋಷಣಾ ಕೇಂದ್ರ’ ಎಂದು ಹೆಸರಿಸಲಾಗಿದ್ದು, ಇದರಿಂದ ಎಲ್ಲರಿಗೂ ಲಾಭವಾಗಲಿದೆ ಎಂದು ಜೋಶಿ ಹೇಳಿದ್ದಾರೆ.

‘ಕೆಲ ಪ್ರದೇಶಗಳಲ್ಲಿ ಪಡಿತರ ಅಂಗಡಿಗಳು ತಿಂಗಳಿಗೆ ಕೇವಲ 8ರಿಂದ 9 ದಿನಗಳು ತೆರೆದಿರುತ್ತವೆ. ಇನ್ನೂ ಕೆಲ ಕಡೆಗಳಲ್ಲಿ ತಿಂಗಳಿಗೊಂದು ಬಾರಿ ಕೆಲಸ ಮಾಡಿ ಉಳಿದೆಲ್ಲಾ ದಿನಗಳು ಮುಚ್ಚಿರುತ್ತವೆ. ಈಗಿರುವ ಪಡಿತರ ವಿತರಕರಿಗೆ ಸಂಬಂಧಿಸಿದ ಕಮಿಷನ್‌ ಪದ್ಧತಿ ಅಸಮರ್ಪಕವಾಗಿದ್ದು, ಲಭ್ಯವಿರುವ ಸ್ಥಳಾವಕಾಶ ಮತ್ತು ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ’ ಎಂದು ಸಚಿವರು ಅಭಿಪ್ರಾಯಪಟ್ಟರು.

ಈ ಯೋಜನೆಯನ್ನು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರು ಸ್ವಾಗತಿಸಿದ್ದು, ದೇಶಾದ್ಯಂತವಿರುವ 5.38 ಲಕ್ಷ ಪಡಿತರ ಅಂಗಡಿಗಳು ಹೊಸ ರೂಪ ಪಡೆಯಲಿವೆ ಎಂದರು.