ಬಜೆಟ್ ಸೆಷನ್ನಲ್ಲೇ
ಮಹಿಳಾ ಮೀಸಲುಬಿಲ್ಗೆ ಕೇಂದ್ರ ಸಜ್ಜು- 2011ರ ಗಣತಿ ಆಧರಿಸಿ ಹಂಚಿಕೆ
- ಸ್ತ್ರೀಯರಿಗೆ 273 ಸ್ಥಾನ ಸಂಭವನವದೆಹಲಿ: ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮಹತ್ವದ ಮಹಿಳಾ ಮೀಸಲಾತಿ ವಿಧೇಯಕವನ್ನು ಆದಷ್ಟು ಶೀಘ್ರ ಜಾರಿಗೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಹೊಸ ಜನಗಣತಿಗಾಗಿ ಕಾಯುವ ಬದಲು 2011ರ ಜನಗಣತಿ ಆಧಾರದ ಮೇಲೆಯೇ ಈ ಮೀಸಲಾತಿ ಜಾರಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.ಮುಂಬರುವ ಕ್ಷೇತ್ರ ಮರುವಿಂಗಡಣೆಯ ವೇಳೆ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ 543ರಿಂದ 816ಕ್ಕೆ ಏರಿಕೆಯಾಗಲಿದೆ. ಇದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲು ನಿರ್ಧರಿಸಲಾಗಿದೆ.
ಮೂಲ ಕಾಯ್ದೆ ಪ್ರಕಾರ ಮೀಸಲಾತಿಯು ಹೊಸ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಂತರವೇ ಅನುಷ್ಠಾನಕ್ಕೆ ಬರಬೇಕು. ಆದರೆ, ಸರ್ಕಾರವು ಇದಕ್ಕಾಗಿ ಇನ್ನೂ ಹಲವು ವರ್ಷ ಕಾಯಬೇಕು. ಅದರ ಬದಲು ಆದಷ್ಟು ಶೀಘ್ರ ಮೀಸಲಾತಿ ಕಾನೂನು ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದರ ಭಾಗವಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಸ್ತರಿಸುವ ತಿದ್ದುಪಡಿ ವಿಧೇಯಕವೊಂದನ್ನು ಈಗಾಗಲೇ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲೇ ಮಂಡಿಸಲು ಸಿದ್ಧತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಧೇಯಕವು ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರವಾಗುವಂತೆ ನೋಡಿಕೊಳ್ಳಲು ಪ್ರತಿಪಕ್ಷಗಳ ವಿಶ್ವಾಸಗಳಿಸುವ ಪ್ರಯತ್ನವನ್ನೂ ಸದ್ಯದಲ್ಲೇ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೀಘ್ರ ಸಂಪುಟದ ಮುಂದೆ ಪ್ರಸ್ತಾಪ:ಅಧಿಕಾರಿಗಳ ಪ್ರಕಾರ ತಿದ್ದುಪಡಿ ವಿಧೇಯಕವು ಇದೇ ವಾರ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆಯುವ ನಿರೀಕ್ಷೆ ಇದ್ದು, ಆ ಬಳಿಕ ಮೊದಲಿಗೆ ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾಗಲಿದೆ.
2023ರಲ್ಲೇ ಅಂಗೀಕಾರ:ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ವಿಧೇಯಕ 2023ರಲ್ಲೇ ಅಂಗೀಕಾರಗೊಂಡಿತ್ತು. ಆದರೆ, ಕ್ಷೇತ್ರ ಪುನರ್ವಿಂಗಡಣೆ ಕಾರ್ಯ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಮೀಸಲಾತಿ ಅನುಷ್ಠಾನ ಇನ್ನೂ ಬಾಕಿ ಉಳಿದಿದೆ.
ಒಂದು ವೇಳೆ ಸರ್ಕಾರವು ಕ್ಷೇತ್ರ ಮರುವಿಂಗಡಣೆಗೂ ಮೊದಲೇ ಮೀಸಲಾತಿ ಜಾರಿ ಮಾಡಬೇಕೆಂದಿದ್ದರೆ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ. ಸಂವಿಧಾನದ ಸೆಕ್ಷನ್ 5 ಅನ್ನು ಇದಕ್ಕಾಗಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕಿದೆ. ಈ ಸೆಕ್ಷನ್ ಮಹಿಳಾ ಮೀಸಲಾತಿಯನ್ನು ಈ ಕುರಿತ ಕಾನೂನು ಕಾನೂನು ಜಾರಿ ಬಳಿಕದ ಮೊದಲ ಜನಗಣತಿ ಆಧಾರದ ಮೇಲೆ ನಡೆಯುವ ಕ್ಷೇತ್ರಮರುವಿಂಗಡಣೆಯೊಂದಿಗೆ ಜೋಡಿಸುತ್ತದೆ.ಸಂವಿಧಾನ ತಿದ್ದುಪಡಿ ಮಾಡಬೇಕಿದ್ದರೆ ಮತದಾನದ ವೇಳೆ ಮೂರನೇ ಎರಡು ಭಾಗದಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ. ಸದ್ಯ ಲೋಕಸಭೆಯಲ್ಲಿ ಬಿಜೆಪಿಯು 240 ಮತ್ತು ರಾಜ್ಯಸಭೆಯಲ್ಲಿ 103 ಸದಸ್ಯ ಬಲ ಹೊಂದಿದ್ದು, ಹೀಗಾಗಿ ಮಿತ್ರಪಕ್ಷಗಳು ಹಾಗೂ ಪ್ರತಿಪಕ್ಷಗಳ ಬೆಂಬಲವನ್ನು ಎದುರುನೋಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಜತೆಗೆ ಮಾತುಕತೆ ಆರಂಭಿಸಲು ವೇದಿಕೆ ಸಿದ್ಧಪಡಿಸಿದೆ ಎನ್ನಲಾಗಿದೆ.