ಸಾರಾಂಶ
ಕದನ ವಿರಾಮ ಜಾರಿಯಾದ ಬೆನ್ನಲ್ಲೇ, ಇದೀಗ ಭಾರತ ತಡೆ ಹಿಡಿದ ಸಿಂಧೂ ಜಲ ಒಪ್ಪಂದದ ಪುನರ್ಜಾರಿಗೂ ಅಮೆರಿಕ ಮಧ್ಯಸ್ಥಿಕೆ ವಹಿಸುವಂತೆ ಪಾಕಿಸ್ತಾನ ಮೊರೆಯಿಡುವ ನಿರೀಕ್ಷೆಯಿದೆ.
ಲಾಹೋರ್: ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ನೀಡಿದ ಎದುರೇಟಿಗೆ ತತ್ತರಿಸಿದ ಪಾಕಿಸ್ತಾನ ಕದನ ವಿರಾಮ ಜಾರಿಗೊಳಿಸುವಂತೆ ಅಮೆರಿಕಕ್ಕೆ ಮೊರೆಯಿಟ್ಟಿತ್ತು. ಕದನ ವಿರಾಮ ಜಾರಿಯಾದ ಬೆನ್ನಲ್ಲೇ, ಇದೀಗ ಭಾರತ ತಡೆ ಹಿಡಿದ ಸಿಂಧೂ ಜಲ ಒಪ್ಪಂದದ ಪುನರ್ಜಾರಿಗೂ ಅಮೆರಿಕ ಮಧ್ಯಸ್ಥಿಕೆ ವಹಿಸುವಂತೆ ಮೊರೆಯಿಡುವ ನಿರೀಕ್ಷೆಯಿದೆ.
ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕ್ರಮದ ವಿರುದ್ಧ ಅಮೆರಿಕದೊಂದಿಗೆ ಚರ್ಚಿಸಬೇಕು. ಭಾರತ ತಕ್ಷಣವೇ ಇದನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ಪಾಕಿಸ್ತಾನದ ಜಲ ತಜ್ಞರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
‘ಸಿಂಧೂ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕಾನೂನುಬಾಹಿರ ಏಕಪಕ್ಷೀಯ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ನಮ್ಮ ಸರ್ಕಾರ ತಕ್ಷಣವೇ ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚಿಸಬೇಕು’ ಎಂದು ಪಾಕಿಸ್ತಾನದ ಜಲ ಮತ್ತು ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಜಾವೈದ್ ಲತೀಫ್ ಸಲಹೆ ನೀಡಿದ್ದಾರೆ.
‘ಕದನ ವಿರಾಮವು ಮೊದಲ ಹೆಜ್ಜೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ಕುಳಿತು, ಸಿಂಧೂ ಜಲ ಒಪ್ಪಂದದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಪಾಕಿಸ್ತಾನದ ಮಾಜಿ ಆಯುಕ್ತ ಸೈಯದ್ ಜಮಾತ್ ಅಲಿ ಶಾ ಹೇಳಿದ್ದಾರೆ.