ಸಾರಾಂಶ
ಹೈದರಾಬಾದ್: ಕರ್ನಾಟಕದ ಹೆಬ್ರಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಹಾಗೂ ಛತ್ತೀಸ್ಗಢದಲ್ಲಿನ ನಕ್ಸಲ್ ಸಂಹಾರದ ಬೆನ್ನಲ್ಲೇ ಇದೀಗ ನೆರೆಯ ತೆಲಂಗಾಣ ರಾಜ್ಯದ ಮುಗುಲು ಜಿಲ್ಲೆಯ ದಟ್ಟಾರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 7 ಮಾವೋವಾದಿಗಳು ನಕ್ಸಲ್ ನಿಗ್ರಹದಳದ ಗುಂಡಿಗೆ ಭಾನುವಾರ ಬಲಿಯಾಗಿದ್ದಾರೆ.
ಏಟೂರುರ್ನಗರಂನ ದಟ್ಟಾರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆ ವೇಳೆ ನಕ್ಸಲ್ ವಿರೋಧಿ ಪಡೆ(ಗ್ರೇ ಹೌಂಡ್ಸ್ ಪಡೆ) ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದು ಈ ಘಟನೆ ಸಂಭವಿಸಿದೆ. ನಕ್ಸಲ್ ಸಂಘಟನೆಯ ತೆಲಂಗಾಣ ರಾಜ್ಯ ಕಾರ್ಯದರ್ಶಿ ಕುಸ್ರಾಮ್ ಮಂಗು ಅಲಿಯಾಸ್ ಬದ್ರು ಕೂಡ ಹತ್ಯೆಗೀಡಾದವರಲ್ಲಿ ಸೇರಿದ್ದಾನೆ.
ಸ್ಥಳದಲ್ಲಿ ಎರಡು ಏ.ಕೆ.47, ಒಂದಷ್ಟು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಪೊಲೀಸ್ ಮಾಹಿತಿದಾರರು ಎಂದು ಆರೋಪಿಸಿ ಮುಲುಗು ಜಿಲ್ಲೆಯಲ್ಲಿ ಪೆರುರು ಗ್ರಾಪಂ ಕಾರ್ಯದರ್ಶಿ ಸೇರಿ ಇಬ್ಬರನ್ನು ನಕ್ಸಲರು ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಈ ಎನ್ಕೌಂಟರ್ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ ಖಚಿತ ಮಾಹಿತಿ ಮೇರೆಗೆ ನಕ್ಸಲ್ ನಿಗ್ರಹಪಡೆಯವರು ಮಾವೋವಾದಿಗಳನ್ನು ಸುತ್ತುವರೆದಿದ್ದು, ಈ ವೇಳೆ ಶರಣಾಗತಿಗೆ ಸೂಚಿಸಿದರೂ ಅವರು ದಾಳಿ ನಡೆಸಿದಾಗ ಎನ್ಕೌಂಟರ್ ನಡೆದಿದೆ.