ದೇಶಾದ್ಯಂತ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ 7 ಅಕ್ರಮ ಬಾಂಗ್ಲಾದೇಶಿ ವಲಸಿಗರು ಸೇರಿದಂತೆ 8 ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಹುದೊಡ್ಡ ಉಗ್ರ ಸಂಚನ್ನು ಪೊಲೀಸರು ಭೇದಿಸಿದಂತಾಗಿದ್ದು, ಮಹಾದುರಂತವೊಂದು ತಪ್ಪಿದೆ. 

ನವದೆಹಲಿ: ದೇಶಾದ್ಯಂತ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ 7 ಅಕ್ರಮ ಬಾಂಗ್ಲಾದೇಶಿ ವಲಸಿಗರು ಸೇರಿದಂತೆ 8 ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಹುದೊಡ್ಡ ಉಗ್ರ ಸಂಚನ್ನು ಪೊಲೀಸರು ಭೇದಿಸಿದಂತಾಗಿದ್ದು, ಮಹಾದುರಂತವೊಂದು ತಪ್ಪಿದೆ. ಬಂಧಿತರಿಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ನಂಟಿರುವುದು ಕಂಡುಬಂದಿದೆ.

ಬಂಧಿತರಿಂದ 8 ಮೊಬೈಲ್‌, 16 ಸಿಮ್‌ಕಾರ್ಡ್‌ ವಶಪಡಿಸಿಕೊಳ್ಳಲಾಗಿದೆ. ಇವುಗಳ ಪ್ರಾಥಮಿಕ ತಪಾಸಣೆ ವೇಳೆ, ಶಂಕಿತ ಉಗ್ರರು ದಾಳಿ ನಡೆಸಬೇಕಾದ ಸ್ಥಳಗಳ ಪರಿಶೀಲನೆ ನಡೆಸಿದ್ದು, ದಾಳಿಗೆ ಅಗತ್ಯವಾದ ಶಸ್ತ್ರಾಸ್ತ್ರ ಖರೀದಿಗೆ ಯೋಜಿಸಿದ್ದ ವಿಷಯಗಳು ಬೆಳಕಿಗೆ ಬಂದಿದೆ. ದೆಹಲಿಯ ಕೆಂಪುಕೋಟೆ ಮತ್ತು ಕೆಲವು ದೇಗುಲಗಳನ್ನು ಗುರಿಯಾಗಿಸಿ ದಾಳಿಗೆ ಪಾಕಿಸ್ತಾನದ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂಬ ಗುಪ್ತಚರ ವರದಿ ಬೆನ್ನಲ್ಲೇ ಈ ಬಂಧನ ನಡೆದಿದೆ.

ಸಿಕ್ಕಿಬಿದ್ದಿದ್ದು ಹೇಗೆ?:

ಫೆ.7ರಂದು ದೆಹಲಿ ಮತ್ತು ಕೋಲ್ಕತಾದ ಮೆಟ್ರೋ ನಿಲ್ದಾಣಗಳ ಬಳಿ ದೇಶವಿರೋಧಿ ಪೋಸ್ಟರ್‌ ಅಂಟಿಸಲಾಗಿತ್ತು. ಅದರಲ್ಲಿ ‘ಫ್ರೀ ಕಾಶ್ಮೀರ್‌’, ‘ಕಾಶ್ಮೀರದಲ್ಲಿನ ಹತ್ಯಾಕಾಂಡ ನಿಲ್ಲಿಸಿ’ ಎಂದೆಲ್ಲಾ ಬರೆಯಲಾಗಿತ್ತು. ಈ ಬಗ್ಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ ವೇಳೆ ಪಶ್ಚಿಮ ಬಂಗಾಳದಲ್ಲಿ ಉಮರ್‌ ಫಾರೂಖ್‌ ಮತ್ತು ರಾಬಿಲ್‌ ಉಲ್‌ ಇಸ್ಲಾಂ ಎಂಬಿಬ್ಬರು ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದರು.

ಅವರು ನೀಡಿದ ಸುಳಿವಿನ ಮೇರೆಗೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ವಿವಿಧ ಸ್ಥಳಗಳ ಮೇಲೆ ಇನ್ನೂ 6 ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಇವರೆಲ್ಲಾ ನಕಲಿ ಆಧಾರ್‌ ಕಾರ್ಡ್‌ ಬಳಸಿ ಸ್ಥಳೀಯ ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂಧಿತರನ್ನು ಮಿಜನೌರ್‌ ರೆಹಮಾನ್‌, ಮೊಹಮ್ಮದ್‌ ಶಬಾತ್‌, ಉಮರ್‌ ಮೊಹಮ್ಮದ್‌ ಲಿಟನ್‌, ಮೊಹಮ್ಮದ್‌ ಶಹೀದ್‌, ಮೊಹಮ್ಮದ್‌ ಉಜ್ಜಲ್‌ ಎಂದು ಗುರುತಿಸಲಾಗಿದೆ.

ಬಂಧಿತರು ಬಾಂಗ್ಲಾದೇಶ ಮೂಲದ ಶಬ್ಬೀರ್‌ ಅಹ್ಮದ್‌ ಎಂಬಾತನ ಸೂಚನೆ ಅನ್ವಯ ಕೆಲಸ ಮಾಡುತ್ತಿದ್ದದ್ದು ಕಂಡುಬಂದಿದೆ. ಶಬ್ಬೀರ್‌, ಸ್ಫೋಟ ಪ್ರಕರಣವೊಂದರಲ್ಲಿ ಭಾರತದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ, ಬಿಡುಗಡೆ ಬಳಿಕ ಬಾಂಗ್ಲಾದೇಶಕ್ಕೆ ತೆರಳಿದ್ದ. ಅಲ್ಲಿ ಲಷ್ಕರ್‌ ಎ ತೊಯ್ಬಾ ಹಾಗೂ ಅದರ ಮುಖ್ಯಸ್ಥ ಹಫೀಜ್‌ ಸಯೀದ್‌ ನೆರವಿನೊಂದಿಗೆ ಉಗ್ರ ಚಟುವಟಿಕೆ ಆರಂಭಿಸಿದ್ದ.

ದಾಳಿ ಶಂಕೆ:

ಫೆ.6ರಂದು ಪಾಕಿಸ್ತಾನದ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿದ 32 ಜನರು ಸಾವನ್ನಪ್ಪಿದ್ದರು. ಇದರ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಸುಳ್ಳು ಆರೋಪ ಮಾಡಿತ್ತು. ಈ ಘಟನೆಗೆ ಪ್ರತೀಕಾರವಾಗಿ ದೆಹಲಿಯ ಕೆಂಪುಕೋಟೆ, ಮತ್ತು ದೆಹಲಿಯ ಕೆಲ ದೇಗುಲಗಳ ಮೇಲೆ ದಾಳಿಗೆ ಲಷ್ಕರ್‌ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಇತ್ತೀಚೆಗೆ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.

ಉಗ್ರರ ಜಾಡು

1. ದೆಹಲಿ, ಕೋಲ್ಕತಾ ಮೆಟ್ರೋ ನಿಲ್ದಾಣಗಳಲ್ಲಿ ಫೆ.7ರಂದು ಕಾಶ್ಮೀರ ವಿರೋಧಿ ಪೋಸ್ಟರ್‌ ಪ್ರತ್ಯಕ್ಷ2. ದೆಹಲಿ ಪೊಲೀಸರ ತನಿಖೆ. ಬಂಗಾಳದಲ್ಲಿ ಇಬ್ಬರ ಬಂಧನ. ತೀವ್ರ ವಿಚಾರಣೆ. ತ.ನಾಡಲ್ಲಿ ಶೋಧ

3. ತಿರುಪ್ಪೂರ್‌ ಗಾರ್ಮೆಂಟ್ಸ್‌ ಫ್ಯಾಕ್ಟರಿಯಿಂದ ಮಂದಿಯ ಬಂಧನ. ನಕಲಿ ಆಧಾರ್‌ ಕಾರ್ಡ್‌ ಪತ್ತೆ

4. ಈ ಎಲ್ಲರ ಮಾಸ್ಟರ್‌ಮೈಂಡ್‌ ಶಬ್ಬೀರ್‌. ಬಾಂಗ್ಲಾದಲ್ಲಿ ಕುಳಿತು ನಿಯಂತ್ರಣ. ಲಷ್ಕರ್‌, ಹಫೀಜ್‌ ನಂಟು