ಬಾಂಗ್ಲಾ ದಂಗೆ ಆಕಸ್ಮಿಕವಲ್ಲ, ಯೋಜಿತ ಸಂಚು : ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್

| Published : Sep 27 2024, 01:16 AM IST / Updated: Sep 27 2024, 06:59 AM IST

Muhammad Yunus

ಸಾರಾಂಶ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ಪ್ರತಿಭಟನೆಗಳ ಹಿಂದೆ ಸಂಚು ಇತ್ತು ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಬಹಿರಂಗಪಡಿಸಿದ್ದಾರೆ.  

ಢಾಕಾ: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ನಿರ್ಗಮನಕ್ಕೆ ಕಾರಣವಾದ ಪ್ರತಿಭಟನೆ ಆಕಸ್ಮಿಕವಲ್ಲ. ಅವರನ್ನು ದೇಶದಿಂದ ಹೊರಹಾಕಲು ಮೊದಲೇ ಸಂಚು ರೂಪಿಸಲಾಗಿತ್ತು ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಕ್ಲಿಂಟನ್ ಗ್ಲೋಬಲ್ ಇನಿಶಿಯೇಟಿವ್‌ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಯೂನಸ್‌, ‘ಬಾಂಗ್ಲಾದ ಹೊಸ ಆವೃತ್ತಿಯನ್ನು ರೂಪಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸೋಣ. ಹಸೀನಾ ರಾಜೀನಾಮೆಯ ಹಿಂದೆ ಯಾರ ಕೈವಾಡವಿದೆ ಎಂದು ಯಾರಿಗೂ ತಿಳಿಯಲಿಲ್ಲ’ ಎನ್ನುತ್ತ, ವಿದ್ಯಾರ್ಥಿ ಕಾರ್ಯಕರ್ತ ಮಹ್ಫುಜ್ ಅಬ್ದುಲ್ಲಾ ಹೆಸರನ್ನೂ ಉಲ್ಲೇಖಿಸಿದ್ದಾರೆ.

ಕಾಣದ ಕೈಗಳ ಕರಾಮತ್ತು ಧೃಡ?: ‘2024ರಲ್ಲಿ ಶಾಂತಿಯುತ ಸಾರ್ವತ್ರಿಕ ಚುನಾವಣೆಯ ಬದಲಿಗೆ ವಾಯುನೆಲೆ ನಿರ್ಮಿಸಲು ಅವಕಾಶ ನೀಡುವಂತೆ ಬಿಳಿ(ಅಮೆರಿಕದ) ವ್ಯಕ್ತಿಯೊಬ್ಬ ಆಫರ್‌ ನೀಡಿದ್ದ’ ಎಂದು ಈ ಹಿಂದೆ ಆರೋಪಿಸಿದ್ದ ಹಸೀನಾ, ಬಾಂಗ್ಲಾದೇಶದೊಳಗೆ ಇನ್ನೊಂದು ದೇಶ ರಚಿಸಲು ಸಂಚು ರೂಪಿಸಲಾಗುತ್ತಿದೆ ಎಂದಿದ್ದರು. ಇದೀಗ ಅಧ್ಯಕ್ಷ ಯೂನಸ್‌ರ ಹೇಳಿಕೆಯಿಂದ, ಹಸೀನಾ ರಾಜೀನಾಮೆಯ ಹಿಂದೆ ಅದೃಶ್ಯ ಶಕ್ತಿಗಳು ಕೆಲಸ ಮಾಡಲಾಗುತ್ತಿವೆ ಎಂಬ ಊಹೆಗೆ ಪುಷ್ಟಿ ಸಿಕ್ಕಂತಾಗಿದೆ.

ಕಳೆದೊಂದು ವರ್ಷದಿಂದ ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಮಿಸಲು ವಿರೋಧಿ ಹೆಸರಲ್ಲಿ ಒಮ್ಮೆಲೆ ಭುಗಿಲೆದ್ದು ಸರ್ಕಾರವನ್ನು ಅಸ್ಥಿರಗೊಳಿಸಿತ್ತು. ನಂತರ ಹಸೀನಾ ಭಾರತಕ್ಕೆ ವಲಸೆ ಬಂದಿದ್ದರು.