ಆರ್‌ಸಿ ಮಾನಹಾನಿ ದಾವೆ: ತರೂರ್‌ಗೆ ಹೈ ನೋಟಿಸ್‌

| Published : May 20 2025, 11:50 PM IST

ಸಾರಾಂಶ

ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ. ಪ್ರಕರಣ ಕುರಿತು ಪ್ರತಿಕ್ರಿಯೆ ನೀಡುವಂತೆ ತರೂರ್‌ಗೆ ಕೋರ್ಟ್‌ ಸೂಚಿಸಿದೆ.

- ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಹೂಡಿದ್ದ ಮೊಕದ್ದಮೆಪಿಟಿಐ ನವದೆಹಲಿ

ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ. ಪ್ರಕರಣ ಕುರಿತು ಪ್ರತಿಕ್ರಿಯೆ ನೀಡುವಂತೆ ತರೂರ್‌ಗೆ ಕೋರ್ಟ್‌ ಸೂಚಿಸಿದೆ.

ತರೂರ್‌ ಹಾಗೂ ರಾಜೀವ್‌ ತಿರುವನಂತಪುರ ಕ್ಷೇತ್ರದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. ‘ಚುನಾವಣೆ ವೇಳೆ ತಿರುವನಂತಪುರಂ ಕ್ಷೇತ್ರದಲ್ಲಿ ಮತದಾರರನ್ನು ಖರೀದಿಸಲಾಗಿದೆ’ ಎಂದು ತರೂರ್‌ ಅವರು ನನ್ನ ವಿರುದ್ಧ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಸುಳ್ಳು ಮತ್ತು ಮಾನಹಾನಿಕರ ಆರೋಪ ಮಾಡಿದ್ದರು. ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಲು ಮತ್ತು ನನ್ನ ವೈಯಕ್ತಿಕ ತೇಜೋವಧೆ ಉದ್ದೇಶದಿಂದಲೇ ಈ ರೀತಿ ಸುಳ್ಳು ಆರೋಪ ಮಾಡಿದ್ದರು’ ಎಂದು ರಾಜೀವ್‌ ಆರೋಪಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ಮಾನನಷ್ಟ ಆರೋಪಕ್ಕೆ ಸಂಬಂಧಿಸಿ ಯಾವುದೇ ಅಂಶಗಳ‍ು ಕಾಣುತ್ತಿಲ್ಲ ಎಂದು ತಿಳಿಸಿ ಫೆ.4ರಂದು ರಾಜೀವ್ ಅರ್ಜಿ ವಜಾ ಮಾಡಿತ್ತು. ಹೀಗಾಗಿ ರಾಜೀವ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.