ಸಾರಾಂಶ
ಜನವರಿ ತಿಂಗಳಲ್ಲಿ ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ನಡೆದ ಭೀಕರ ಘಟನೆಗೆ ರಾಜ್ಯದ ಟಿಎಂಸಿ ಸರ್ಕಾರವೇ 100ಕ್ಕೆ 100 ಹೊಣೆ. ಸಂದೇಶ್ಖಾಲಿ ಘಟನೆ ಶೇ.100ರಷ್ಟು ಅವಮಾನಕರ ಸಂಗತಿ ಎಂದು ಕಲ್ಕತ್ತಾ ಹೈಕೋರ್ಟ್ ಕಿಡಿಕಾರಿದೆ.
ಕೋಲ್ಕತಾ: ಜನವರಿ ತಿಂಗಳಲ್ಲಿ ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ನಡೆದ ಭೀಕರ ಘಟನೆಗೆ ರಾಜ್ಯದ ಟಿಎಂಸಿ ಸರ್ಕಾರವೇ 100ಕ್ಕೆ 100 ಹೊಣೆ. ಸಂದೇಶ್ಖಾಲಿ ಘಟನೆ ಶೇ.100ರಷ್ಟು ಅವಮಾನಕರ ಸಂಗತಿ ಎಂದು ಕಲ್ಕತ್ತಾ ಹೈಕೋರ್ಟ್ ಕಿಡಿಕಾರಿದೆ.
ಸಂದೇಶ್ಖಾಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಭೂ ಕಬಳಿಕೆ ಘಟನೆಗೆ ಸಂಬಂಧಿಸಿದ ಅರ್ಜಿಗಳನ್ನು ಆಲಿಸಿದ ಪೀಠ,‘ರಾಜ್ಯದಲ್ಲಿ ಪ್ರತಿಯೊಬ್ಬರ ರಕ್ಷಣೆಯು ರಾಜ್ಯ ಸರ್ಕಾರದ ಹೊಣೆಯಾಗಿರುತ್ತದೆ. ಭದ್ರತೆ ವಿಫಲವಾದಲ್ಲಿ ಇದಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕಾರಣವಾಗಲಿದೆ’ ಎಂದು ತೀವ್ರವಾಗಿ ಪ್ರತಿಕ್ರಿಯಸಿತು.ಅರ್ಜಿದಾರರ ಪರ ವಕೀಲೆ ಪ್ರಿಯಾಂಕಾ ತಿಬ್ರೇವಾಲ್ ವಾದ ಮಂಡಿಸಿ,‘ಈಗಲೂ ಹಲವಾರು ಸಂತ್ರಸ್ತರು ನನ್ನನ್ನು ಭೇಟಿಯಾಗುತ್ತಿದ್ದಾರೆ. ಅದರಲ್ಲಿ ಎಷ್ಟೋ ಹೆಣ್ಣುಮಕ್ಕಳು ತಮ್ಮ ತಂದೆಯಿಂದ ಕಬಳಿಸಲ್ಪಟ್ಟ ಭೂಮಿಯನ್ನು ಪಡೆಯಲು ಹೋಗಿ ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಇದರಲ್ಲಿ ಶಾಜಹಾನ್, ಪೊಲೀಸರು, ಭೂ ಇಲಾಖೆಯ ಅಧಿಕಾರಿಗಳು, ದೊಡ್ಡ ದೊಡ್ಡವರೆಲ್ಲ ಭಾಗಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ,‘ಪಶ್ಚಿಮ ಬಂಗಾಳ ಮಹಿಳೆಯರಿಗೆ ಸುರಕ್ಷಿತ ಪ್ರದೇಶ ಎಂದು ಬಣ್ಣಿಸಲಾಗುತ್ತದೆ. ಆದರೆ ಸಂದೇಶ್ಖಾಲಿ ಘಟನೆ, ಈ ಕೀರ್ತಿಯನ್ನು ಕಿತ್ತುಕೊಳ್ಳುವಂತಿದೆ. ಆರೋಪಗಳಲ್ಲಿ ಶೇ.1ರಷ್ಟು ಸತ್ಯವಾದರೂ, ಅದು ದೊಡ್ಡ ಅವಮಾನ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆ’ ಎಂದು ಟಿಎಂಸಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿತು.