ಸಾರಾಂಶ
ನವದೆಹಲಿ ನಿಲ್ದಾಣದಲ್ಲಿ 18 ಜನರ ಬಲಿಪಡೆದ ಭೀಕರ ಕಾಲ್ತುಳಿತ ಘಟನೆ ಬೆನ್ನಲ್ಲೇ ಅಂತಹ ಘಟನೆಗಳು ಮರುಕಳಿಸುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಎಲ್ಲಾ ನಿಲ್ದಾಣಗಳಲ್ಲಿ ಅಧಿಕ ಪ್ರಯಾಣಿಕರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.
ನವದೆಹಲಿ: ದೇಶದ ಅತಿ ದೊಡ್ಡ ರೈಲು ನಿಲ್ದಾಣಗಳಲ್ಲಿ ಒಂದಾದ ನವದೆಹಲಿ ನಿಲ್ದಾಣದಲ್ಲಿ 18 ಜನರ ಬಲಿಪಡೆದ ಭೀಕರ ಕಾಲ್ತುಳಿತ ಘಟನೆ ಬೆನ್ನಲ್ಲೇ ಅಂತಹ ಘಟನೆಗಳು ಮರುಕಳಿಸುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಎಲ್ಲಾ ನಿಲ್ದಾಣಗಳಲ್ಲಿ ಅಧಿಕ ಪ್ರಯಾಣಿಕರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.
ಇದರ ಭಾಗವಾಗಿ, ವಿಶೇಷ ಸಂದರ್ಭಗಳಲ್ಲಿ ಅತ್ಯಧಿಕ ಜನ ಸೇರುವ 60 ರೈಲು ನಿಲ್ದಾಣಗಳಲ್ಲಿ ಅಧಿಕ ಜನದಟ್ಟಣೆಯಾದಾಗ ಅದನ್ನು ನಿಭಾಯಿಸಲು ಶಾಶ್ವತ ಹೋಲ್ಡಿಂಗ್ ಝೋನ್ (ಜನರ ನಿಲುಗಡೆ ಸ್ಥಳ) ಸ್ಥಾಪಿಸಿ, ಬಿಕ್ಕಟ್ಟು ನಿರ್ವಹಣೆಗೆ ಎಐ ಬಳಕೆಗೆ ನಿರ್ಧರಿಸಲಾಗಿದೆ. ಜೊತೆಗೆ, ಸ್ಥಳೀಯ ಅಧಿಕಾರಿಗಳಿಗೆ ಸಾಂದರ್ಭಿಕ ಅರಿವು ಮತ್ತು ಬಿಕ್ಕಟ್ಟು ನಿರ್ವಹಣೆಗೆ ವಿಶೇಷ ತರಬೇತಿ ನೀಡಲಾಗುವುದು.
ತಂತ್ರಜ್ಞಾನದ ಬಳಕೆ:
ಎಐ ಸೇರಿದಂತೆ ಸೂಕ್ತ ತಂತ್ರಜ್ಞಾನಗಳನ್ನು ಬಳಸಿ, ರೈಲು ತಡವಾದ ಸಂದರ್ಭಗಳಲ್ಲಿ ಜನದಟ್ಟಣೆಯ ಮೇಲೆ ಕಣ್ಣಿಡಲಾಗುವುದು. ಇವುಗಳಿಂದ ನಿಲ್ದಾಣದ ಮೇಲ್ಸೇತುವೆ, ಮೆಟ್ಟಿಲುಗಳಂತಹ ಸ್ಥಳಗಳಲ್ಲಿ ಕುಳಿತವರನ್ನು ನೋಡಬಹುದು.
ಪ್ರಯಾಗ್ರಾಜ್ಗೆ ಸಂಪರ್ಕ ಹೊಂದಿರುವ 35 ನಿಲ್ದಾಣಗಳ ಮೇಲ್ವಿಚಾರಣೆಯನ್ನು ಕೇಂದ್ರ ವಾರ್ ರೂಂ (ಕೇಂದ್ರೀಕೃತ ಸೂಚನೆ ನೀಡುವ ಸ್ಥಳ)ನಿಂದ ನಡೆಸಲಾಗುವುದು. ಈಗಾಗಲೇ ನವದೆಹಲಿ ನಿಲ್ದಾಣದಲ್ಲಿ 200 ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಅನ್ಯ ಕ್ರಮಗಳು:
ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಾಣದ ಗುರುತುಗಳ ಮೂಲಕ ದಾರಿ ತೋರಿಸುವ ವ್ಯವಸ್ಥೆ ಮಾಡಲಾಗುವುದು. ಜನದಟ್ಟಣೆ ಸಂಬಂಧಿತ ಸಮಸ್ಯೆಗಳ ಕಾರಣ ಕಂಡುಹಿಡಿಯಲು ವಿಶೇಷ ಅಭಿಯಾನ ನಡೆಸಲಾಗುವುದು ಹಾಗೂ ಆ ಬಗ್ಗೆ ಪ್ರಯಾಣಿಕರು, ಕೂಲಿಗಳು, ವ್ಯಾಪಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು.
ಮಗು ಎತ್ತಿಕೊಂಡೇ ದೆಹಲಿ ರೈಲು ನಿಲ್ದಾಣದಲ್ಲಿ ಮಹಿಳಾ ಆರ್ಪಿಎಫ್ ಸಿಬ್ಬಂದಿ ಸೇವೆ
ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 18 ಮಂದಿ ದುರ್ಮರಣಕ್ಕೀಡಾದ ಘಟನೆ ಬಳಿಕ ಭದ್ರತಾ ಸಿಬ್ಬಂದಿಗಳು ಕಟ್ಟೆಚ್ಚರದಿಂದ ಕಾರ್ಯನಿರತರಾಗಿದ್ದಾರೆ. ಇದರ ನಡುವೆ ರೈಲ್ವೆ ಪೊಲೀಸ್ ಪಡೆಯ (ಆರ್ಪಿಎಫ್) ಮಹಿಳಾ ಕಾನ್ಸ್ಟೆಬಲ್ ಒಬ್ಬರು ಕರ್ತವ್ಯ ಮತ್ತು ತಾಯ್ತನ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಆರ್ಪಿಎಫ್ ಕಾನ್ಸ್ಟೆಬಲ್ ರೀನಾ ಎಂಬುವವರು ತಮ್ಮ 1 ವರ್ಷದ ಮಗುವನ್ನು ಎತ್ತಿಕೊಂಡೇ ರೈಲು ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಣದಲ್ಲಿ ತೊಡಗಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರ ಬದ್ಧತೆಯನ್ನು ಕಂಡು ಪ್ರಯಾಣಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಟಿಕೆಟ್ ಇಲ್ಲದಿದ್ದರೆ ಬಿಹಾರ ರೈಲು ನಿಲ್ದಾಣದ ಒಳಗೆ ಜನರ ಪ್ರವೇಶ ನಿರ್ಬಂಧ
ಪಟನಾ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಲು ಬಿಹಾರದಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಭಾರೀ ನೂಕು ನುಗ್ಗಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಟಿಕೆಟ್ಗಳಿಲ್ಲದ ಜನರು ರೈಲ್ವೆ ನಿಲ್ದಾಣಗಳಿಗೆ ಪ್ರವೇಶಿಸುವುದನ್ನು ನಿಷೇಧಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಪೂರ್ವ ಕೇಂದ್ರ ರೈಲ್ವೆ(ಇಸಿಆರ್) ಮಾಹಿತಿ ನೀಡಿದೆ.