ದಕ್ಷಿಣ ಗೆಲ್ಲಲು ಕೃತಕ ಬುದ್ಧಿಮತ್ತೆಗೆ ಬಿಜೆಪಿ ಮೊರೆ

| Published : Mar 07 2024, 01:46 AM IST / Updated: Mar 07 2024, 03:58 PM IST

ಸಾರಾಂಶ

ಈ ಬಾರಿ 370ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಭಾರತೀಯ ಜನತಾ ಪಕ್ಷ ಇದಕ್ಕಾಗಿ ಕೃತಕ ಬುದ್ಧಿಮತ್ತೆ ಮೊರೆ ಹೋಗಿದೆ.

ನವದೆಹಲಿ: ಈ ಬಾರಿ 370ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಭಾರತೀಯ ಜನತಾ ಪಕ್ಷ ಇದಕ್ಕಾಗಿ ಕೃತಕ ಬುದ್ಧಿಮತ್ತೆ ಮೊರೆ ಹೋಗಿದೆ. 

ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತವನ್ನು ತನ್ನ ತೆಕ್ಕೆಗೆ ಪಡೆಯುವ ಸಲುವಾಗಿ ಇಂಥದ್ದೊಂದು ತಂತ್ರವನ್ನು ಪಕ್ಷ ಪ್ರಯೋಗಿಸುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ 129 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು ಕೇವಲ 29. ಅದರಲ್ಲೂ ಬಹುಪಾಲು ಕರ್ನಾಟಕದಿಂದ ಬಂದಿತ್ತು.

ಹೀಗಾಗಿ ಈ ಬಾರಿ ಕರ್ನಾಟಕ ಜೊತೆಗೆ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಜನರ ಮನ ಗೆಲ್ಲಲು ಬಿಜೆಪಿ ಕೃತಕ ಬುದ್ಧಿಮತ್ತೆ ಮೊರೆ ಹೋಗಿದೆ.

ಅಂದರೆ ಪ್ರಧಾನಿ ನರೇಂದ್ರ ಮೋದಿ ಈ ರಾಜ್ಯಗಳಿಗೆ ಭೇಟಿ ನೀಡಿದ ವೇಳೆ ಅವರ ಭಾಷಣವನ್ನು ಆಯಾ ರಾಜ್ಯಗಳ ಭಾಷೆಗಳಿಗೆ ತತ್‌ಕ್ಷಣದಲ್ಲಿ ತರ್ಜುಮೆ ಮಾಡಿ ಪ್ರಸಾರ ಮಾಡಲಾಗುವುದು. 

ಇದರಿಂದ ಜನರನ್ನು ಹೆಚ್ಚು ಸುಲಭವಾಗಿ ತಲುಪಬಹುದಾಗಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು ಎನ್ನಲಾಗಿದೆ. ದಕ್ಷಿಣದ ಈ ರಾಜ್ಯಗಳ ಜೊತೆ ಪಂಜಾಬ್‌, ಒಡಿಶಾ, ಮಹಾರಾಷ್ಟ್ರದಲ್ಲೂ ಇದೇ ತಂತ್ರ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.

ಇತ್ತೀಚೆಗೆ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಕಾಶಿ-ತಮಿಳು ಸಂಗಮ ಕಾರ್ಯಕ್ರಮ ಉದ್ದೇಶಿಸಿ ಮೋದಿ ಮಾತನಾಡುವ ವೇಳೆ ಅವರ ಭಾಷಣವನ್ನು ತತ್‌ಕ್ಷಣದಲ್ಲೇ ಭಾಷಿಣಿ ತಂತ್ರಜ್ಞಾನ ಬಳಸಿ ತಮಿಳಿಗೂ ಭಾಷಾಂತರಿಸಿ ಪ್ರಸಾರ ಮಾಡಲಾಗಿತ್ತು. 

ಈ ತಂತ್ರಜ್ಞಾನ ನಾನು ನಿಮ್ಮನ್ನು ಹೆಚ್ಚು ಸುಲಭವಾಗಿ ತಲುಪಲು ನೆರವಾಗಲಿದೆ ಎಂದು ಮೋದಿ ಬಣ್ಣಿಸಿದ್ದರು.