ಸಾರಾಂಶ
ನವದೆಹಲಿ: ಭಾರತದ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯ (ಪಿಡಿಎಸ್) ವಿಸ್ತರಣೆಯು ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳ 18 ಲಕ್ಷ ಮಕ್ಕಳ ಕುಂಠಿತ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅಮೆರಿಕದ ಎಕನಾಮಿಕ್ ಅಸೋಸಿಯೇಷನ್ನ ಅಧ್ಯಯನವೊಂದು ತಿಳಿಸಿದೆ.
ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ (ಎನ್ಎಫ್ಎಸ್ಎ)ಯಡಿ 1997ರಲ್ಲಿ ಆರಂಭವಾದ ಪಡಿತರ ವಿತರಣಾ ಕಾರ್ಯಕ್ರಮವನ್ನು 2013ರಲ್ಲಿ ವಿಸ್ತರಿಸಲಾಯಿತು. 2020ರಲ್ಲಿ ಕೋವಿಡ್-19 ಆರಂಭವಾದ ನಂತರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಭಾಗವಾಗಿ ಇದನ್ನು ಮತ್ತಷ್ಟು ಸುಧಾರಿಸಲಾಯಿತು. ಈ ಯೋಜನೆಯಡಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 3 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ ಒದಗಿಸಲಾಗುತ್ತದೆ.
ಅಧ್ಯಯನ ವರದಿ ಹೇಳಿದ್ದೇನು?
ಮಕ್ಕಳ ಕುಂಠಿತ ಬೆಳವಣಿಗೆ, ಪೋಷಣೆ ಮತ್ತು ಆಹಾರ ವೈವಿಧ್ಯತೆಯ ಮೇಲೆ ಎನ್ಎಫ್ಎಸ್ಎಯ ಪ್ರಭಾವದ ಕುರಿತು ಮೌಲ್ಯಮಾಪನ ನಡೆಸಲು ಅಧ್ಯಯನ ಕೈಗೊಳ್ಳಲಾಗಿತ್ತು. ಐಐಎಂ ಬೆಂಗಳೂರು ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ಹಾಗೂ ಕ್ಯಾಲ್ಗರಿ ವಿಶ್ವವಿದ್ಯಾಲಯದ ಸಂಶೋಧಕರು, ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಜಾರ್ಖಂಡ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳ 30 ಹಳ್ಳಿಗಳ, ಪಡಿತರ ಚೀಟಿ ಹೊಂದಿದ್ದ ಕುಟುಂಬಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದರು. ಸರ್ಕಾರ ಒದಗಿಸಿದ ಪಡಿತರದಿಂದ ಆ ಕುಟುಂಬಗಳ 18 ಲಕ್ಷ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಹೊರಬಂದಿದ್ದಾರೆ.
2 ವರ್ಷದೊಳಗಿನ ಮಕ್ಕಳಿಗೆ ಇದರಿಂದ ವಿಶೇಷ ಪ್ರಯೋಜನ ಉಂಟಾಗಿದೆ. ಯೋಜನೆಯಿಂದ ಜನರ ಆದಾಯ ಹೆಚ್ಚಳವಾಗಿದೆ. ಜನರಿಗೆ ವೈವಿಧ್ಯಮಯ ಆಹಾರ ಸೇವನೆ ಲಭ್ಯವಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.