ಸಾರಾಂಶ
ಕೋಲ್ಕತಾ: ಬಂಗಾಳದಲ್ಲಿ ಆರ್ಜಿ ಕರ್ ಆಸ್ಪತ್ರೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರು ಮುಷ್ಕರದ ಹೆಸರಿನಲ್ಲಿ ರಾತ್ರಿ ಹೊತ್ತು ಬಾರ್ಗೆ ಹೋಗಿ ಮದ್ಯ ಖರೀದಿ ಮಾಡಿ ಸೇವಿಸುತ್ತಾರೆ ಎಂದು ಟಿಎಂಸಿ ಶಾಸಕ ಸ್ವಪನ್ ದೇಬ್ನಾಥ್ ಹೇಳಿದ್ದಾರೆ. ಶುಕ್ರವಾರ ಈ ಬಗ್ಗೆ ಮಾತನಾಡಿದ ಅವರು,‘ನಾನು ಯಾರನ್ನು ದೂಷಿಸುತ್ತಿಲ್ಲ. ಆದರೆ ಇದನ್ನು ನಾನು ಕಣ್ಣಾರೆ ನೋಡಿದ್ದೇನೆ. ರಾತ್ರಿ 2 ಗಂಟೆ ವೇಳೆಗೆ ಯುವತಿಯರು ಯುವಕರೊಂದಿಗೆ ಬಾರ್ನಲ್ಲಿ ಕುಳಿತು ಬಿಯರ್ ಕುಡಿಯುತ್ತಿದ್ದರು. ಒಂದು ವೇಳೆ ಏನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆ ನಾವೇ ಅಲ್ಲವೇ ಜವಾಬ್ದಾರಿ ಅಲ್ಲವೇ ಎಂದು ಹೇಳಿದ್ದಾರೆ. ಟಿಎಂಸಿ ಶಾಸಕರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಟಿಎಂಸಿಯನ್ನು ಜಾಡಿಸಿವೆ.
==ಸ್ಟಾರ್ ಇನ್ಷೂರೆನ್ಸ್ ಗ್ರಾಹಕರ ಮಾಹಿತಿ ಟೆಲಿಗ್ರಾಂಲ್ಲಿ ಸೋರಿಕೆ
ನವದೆಹಲಿ: ಸ್ಟಾರ್ ಹೆಲ್ತ್ ಆಂಡ್ ಅಲೈಡ್ ಇನ್ಷೂರೆನ್ಸ್ ಲಿ.ನ ಗ್ರಾಹಕರ ವೈದ್ಯಕೀಯ ವರದಿ ಸೇರಿದಂತೆ ಇತರ ಖಾಸಗಿ ಮಾಹಿತಿಗಳು ಟೆಲಿಗ್ರಾಂನ ಚಾಟ್ಬಾಟ್ನ ಮೂಲಕ ಸೋರಿಕೆಯಾಗಿದೆ. ಲಕ್ಷಾಂತರ ಜನರ ಖಾಸಗಿ ಮಾಹಿತಿ ಮಾರಾಟಕ್ಕಿದ್ದು, ಬಾಟ್ಗಳ ಮೂಲಕ ಅವುಗಳನ್ನು ನೋಡಬಹುದಾಗಿದೆ. ಇಂಥ ಮಾಹಿತಿಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ನಡುವೆ ಮಾಹಿತಿ ಸೋರಿಕೆ ಕುರಿತು ಸ್ಟಾರ್ ಹೆಲ್ತ್ ಸಂಸ್ಥೆ ದೂರು ನೀಡಿದ್ದು, ಗ್ರಾಹಕರ ಸೂಕ್ಷ್ಮ ಮಾಹಿತಿ ಸುರಕ್ಷಿತವಾಗಿದ್ದು, ಗೌಪ್ಯತೆಯೊಂದಿಗೆ ರಾಜಿ ಆಗಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
==ರಾಹುಲ್ ಉಗ್ರನೆಂದ ಕೇಂದ್ರ ಸಚಿವ ಬಿಟ್ಟು ತಲೆ ತಂದವರಿಗೆ 1 ಎಕರೆ ಜಾಗ: ಕೈ ಶಾಸಕ
ಹೈದರಾಬಾದ್: ರಾಹುಲ್ ಗಾಂಧಿ ಅವರನ್ನು ಉಗ್ರ ಎಂದು ಟೀಕಿಸಿದ್ದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರ ತಲೆಯನ್ನು ತಂದವರಿಗೆ 1 ಎಕರೆ ಭೂಮಿ ನೀಡಲಾಗುವುದು ಎಂದು ತೆಲಂಗಾಣದ ಕಾಂಗ್ರೆಸ್ ಶಾಸಕ ವಿವಾದಿತ ಘೋಷಣೆ ಮಾಡಿದ್ದಾರೆ. ಸಚಿವರ ಹೇಳಿಕೆ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದ ಶಾಸಕ ವೆದ್ಮಾ ಬೊಜ್ಜು, ‘ಕೇಂದ್ರ ಸಚಿವ ಬಿಟ್ಟು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು. ಇಲ್ಲವಾದರೆ ನಾನು ಖಾನಾಪುರದ ಶಾಸಕನಾಗಿ ಘೋಷಿಸುತ್ತಿದ್ದೇನೆ. ಯಾರು ಸಚಿವರ ತಲೆ ಕತ್ತರಿಸಿ ತರುತ್ತಾರೋ ಅವರಿಗೆ ನನ್ನ ಪಿತ್ರಾರ್ಜಿತ ಆಸ್ತಿಯ 1 ಎಕರೆ 38 ಗುಂಟೆ ಭೂಮಿಯನ್ನು ನೀಡುತ್ತೇನೆ ಎಂದು ಹೇಳಿದರು.
==ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದ ರಾಹುಲ್ ಗಾಂದಿ ವಿರುದ್ಧ 3 ಪ್ರಕರಣ ದಾಖಲು
ರಾಯ್ಪುರ: ಅಮೆರಿಕ ಭೇಟಿ ವೇಳೆ, ಭಾರತದಲ್ಲಿ ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಹೇಳಿಕೆ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಛತ್ತೀಸ್ಗಢದಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ರಾಯ್ಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ, ಬಿಲಾಸ್ಪುರ್ ಠಾಣೆಯಲ್ಲಿ ಗುರುವಾರ, ದುರ್ಗ್ ಜಿಲ್ಲೆಯ ಕೊತ್ವಾಲಿ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿವೆ. ಮೂರೂ ಠಾಣೆಗಳಲ್ಲಿ ಬಿಜೆಪಿ ನಾಯಕರು ಈ ದೂರು ಸಲ್ಲಿಸಿದ್ದಾರೆ. ರಾಹುಲ್ ಸಿಖ್ಖರ ಪೇಟಾದ ಕುರಿತ ಹೇಳಿಕೆಯಿಂದ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಬಿಜೆಪಿಯ ಅಮರ್ಜೀತ್ ಸಿಂಗ್ ಛಬ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
==ಲೈಂಗಿಕ ಕಿರುಕುಳ ಆರೋಪ:ಡ್ಯಾನ್ಸ್ ಮ್ಯಾಸ್ಟರ್ ಜಾನಿಗೆ 14 ದಿನ ನ್ಯಾಯಾಂಗ ಬಂಧನ
ಹೈದರಾಬಾದ್: ಲೈಂಗಿಕ ಕಿರುಕುಳ ಆರೋಪದ ಮೇಲೆ ಬಂಧಿತರಾಗಿರುವ ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರನ್ನು ನಗರ ನ್ಯಾಯಾಲಯ ಶುಕ್ರವಾರ14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಗುರುವಾರ ಜಾನಿ ಮಾಸ್ಟರ್ರನ್ನು ಸೈಬರಾಬಾದ್ ಪೊಲೀಸರು ಗೋವಾದಲ್ಲಿ ಬಂಧಿಸಿ ಹೈದರಾಬಾದ್ಗೆ ಕರೆ ತಂದು ನಗರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೊರಾಂಗಣ ಚಿತ್ರೀಕರಣದ ವೇಳೆ ಜಾನಿ ಮಾಸ್ಟರ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಎಂದು ಆರೋಪಿಸಿ ಸಹ ಕೊರಿಯೋಗ್ರಾಫರ್ ಒಬ್ಬರು ಸೆ.15 ರಂದು ದೂರು ದಾಖಲಿಸಿದ್ದರು.