ಮೋದಿ, ಅನುರಾಗ್‌ ವಿರುದ್ಧ ಸ್ಪೀಕರ್‌ಗೆ ಕಾಂಗ್ರೆಸ್‌ ದೂರು

| Published : Jul 05 2024, 12:51 AM IST / Updated: Jul 05 2024, 07:06 AM IST

ಸಾರಾಂಶ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಮಾಡಿದ ಭಾಷಣದಲ್ಲಿ ಸಾಕಷ್ಟು ತಪ್ಪುಗಳಿದೆ.

ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಮಾಡಿದ ಭಾಷಣದಲ್ಲಿ ಸಾಕಷ್ಟು ತಪ್ಪುಗಳಿದೆ. ಈ ಬಗ್ಗೆ ಇಬ್ಬರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಸಭೆಯ ಸ್ಪೀಕರ್‌ಗೆ ಓಂ ಬಿರ್ಲಾಗೆ ಕಾಂಗ್ರೆಸ್‌ ಪತ್ರ ರವಾನಿಸಿದೆ

ವಿಪಕ್ಷ ನಾಯಕ ರಾಹುಲ್‌ ಗಾಂಧಿ ತಮ್ಮ ಭಾಷಣದಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್‌ಗೆ ಬಿಜೆಪಿ ದೂರು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ ಕೂಡಾ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿದೆ.

ಈ ಕುರಿತು ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ಸದಸ್ಯರ ಹೇಳಿಕೆಯಲ್ಲಿನ ಹುಳುಕನ್ನು ಎತ್ತಿತೋರಿಸಲು ಬಯಸುವವರು ಮೊದಲು ಆ ಕುರಿತು ಸ್ಪೀಕರ್‌ಗೆ ಪತ್ರ ಬರೆದು ಸದನದಲ್ಲಿ ಆ ವಿಚಾರವನ್ನು ಎತ್ತಲು ಅನುಮತಿ ಪಡೆಯಬೇಕು ಎಂದು ನಿರ್ದೇಶಿಸುವ ನಿರ್ದೇಶನ 115(1)ನ್ನು ಜಾರಿಗೊಳಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಹಾಗೂ ಠಾಕುರ್‌ ಅವರ ತಪ್ಪುಹೇಳಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.

ಜು.8 ರಿಂದ ಮೋದಿ ರಷ್ಯಾ, ಆಸ್ಟ್ರಿಯಾಗೆ ಭೇಟಿ

41 ವರ್ಷಗಳ ಬಳಿಕ ಆಸ್ಟ್ರಿಯಾಕ್ಕೆ ಭಾರತದ ಪ್ರಧಾನಿ ಭೇಟಿನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜುಲೈ 8 ರಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಜು.8 ಮತ್ತು 9 ರಂದು ರಷ್ಯಾದಲ್ಲಿ ನಡೆಯಲಿರುವ 22ನೇ ವರ್ಷದ ಭಾರತ ಮತ್ತು ರಷ್ಯಾ ನಡುವಿನ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಷ್ಯಾ ಪ್ರವಾಸದ ಬಳಿಕ ಮೋದಿ ಆಸ್ಟ್ರಿಯಾ ದೇಶಕ್ಕೆ ಪ್ರಯಾಣಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 41 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡಲಿದ್ದು, ಸಾಕಷ್ಟು ಮಹತ್ವವನ್ನು ಪಡೆದಿದೆ. ಮೋದಿ ಸುಮಾರು 5 ವರ್ಷಗಳ ಬಳಿಕ ರಷ್ಯಾಗೆ ಭೇಟಿ ನೀಡುತ್ತಿದ್ದು, 2019ರಲ್ಲಿ ರಷ್ಯಾದ ಪೂರ್ವ ವ್ಲಾಡಿವೋಸ್ಟಾಕ್‌ ನಡೆದಿದ್ದ ಆರ್ಥಿಕ ಸಮ್ಮೇಳನದನಲ್ಲಿ ಕಡೆಯದಾಗಿ ಭಾಗವಹಿಸಿದ್ದರು.