ಸಾರಾಂಶ
ನವದೆಹಲಿ: ಎನ್ಡಿಎ ಮೈತ್ರಿಕೂಟವ ಮಹಾರಾಷ್ಟ್ರದ ರಾಜ್ಯಪಾಲ ರಾಧಾಕೃಷ್ಣನ್ ಅವರನ್ನು ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ವಿಪಕ್ಷಗಳು ಕೂಡಾ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿವೆ. ನೂತನ ಉಪರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಎನ್ಡಿಎ ಅಭ್ಯರ್ಥಿಗಳ ಬೆಂಬಲಿಸುವಂತೆ ಕೇಂದ್ರ ಸರ್ಕಾರ ವಿವಿಧ ವಿಪಕ್ಷಗಳಿಗೆ ಮನವಿ ಮಾಡಿದ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
ಜಂಟಿ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಮಂಗಳವಾರ ವಿಪಕ್ಷಗಳ ನಾಯಕರು ಸಭೆ ಸೇರಿದ್ದರು. ಈ ವೇಳೆ ಡಿಎಂಕೆ ನಾಯಕ ತಿರುಚಿ ಶಿವ, ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಮತ್ತು ಚಂದ್ರಯಾನ, ಮಂಗಳಯಾನ ಯೋಜನೆಯಲ್ಲಿ ಭಾಗಿಯಾಗಿದ್ದ ಇಸ್ರೋದ ನಿವೃತ್ತ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.
ದಿಢೀರ್ ರಾಜೀನಾಮೆ ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹ
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಅವರ ದಿಢೀರ್ ರಾಜೀನಾಮೆ (resignation), ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹಗಳಿಗೆ ಕಾರಣವಾಗಿದೆ. ಅವರು ಇಂಥದ್ದೊಂದು ಕಠಿಣ ನಿರ್ಧಾರವನ್ನ ಏಕಾಏಕಿ ತೆಗೆದುಕೊಂಡಿದ್ದು ಹೇಗೆ? ಇದರ ಹಿಂದೆ ಯಾವ ಒತ್ತಡವಿತ್ತು ಅನ್ನೋದರ ಬಗ್ಗೆ ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ. ಹಾಗಿದ್ದಲ್ಲಿ, ಮೋದಿ (Narendra Modi) ಸರ್ಕಾರ ಏಕೆ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ರಿಗೆ ರಾಜೀನಾಮೆ ಕೊಡುವಂತೆ ಒತ್ತಡ ಹಾಕಿತು? ಇಲ್ಲಿದೆ inside story
ಕೆಲ ದಿನಗಳಿಂದ ಯಾರೇ ಭೇಟಿ ಯಾಗಲು ಹೋದರು ಕೇಂದ್ರ ಸರ್ಕಾರದ ಬಗ್ಗೆ ಧನ್ಕರ್ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರಂತೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರನ್ನ ಕರೆಸಿ ಕೊಂಡು ಸರ್ಕಾರ ತನ್ನ ಜಾಟ್ ಸಮುದಾಯದ ಬಗ್ಗೆ ಅನ್ಯಾಯ ಮಾಡಿದೆ ಎಂದೆಲ್ಲ ಧನ್ಕರ್ ಮಾತನಾಡಿದ್ದರು ಎಂದು ಹೇಳಲಾಗ್ತಿದೆ.