ಸಾರಾಂಶ
ಭಾರತದ ಷೇರುಪೇಟೆಯಲ್ಲಿ ಸೋಮವಾರ ಭಾರಿ ಹೊಯ್ದಾಟ ಆಗುತ್ತಿದ್ದಂತೆಯೇ ಈ ವಿದ್ಯಮಾನಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ನಿಗಾ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ
ನವದೆಹಲಿ: ಭಾರತದ ಷೇರುಪೇಟೆಯಲ್ಲಿ ಸೋಮವಾರ ಭಾರಿ ಹೊಯ್ದಾಟ ಆಗುತ್ತಿದ್ದಂತೆಯೇ ಈ ವಿದ್ಯಮಾನಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ನಿಗಾ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಟ್ರಂಪ್ ಮಾಡಿರುವ ಘೋಷಣೆಗಳು ದೂರಗಾಮಿ ಪರಿಣಾಮ ಹೊಂದಿವೆ. ಹೀಗಾಗಿ ಅವರು ಖುದ್ದು ಮಧ್ಯಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಹಾಗೂ ಶಶಿ ತರೂರ್ ಆದಿಯಾಗಿ ಅನೇಕರು ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಹೇಳಿಕೆ ನೀಡಿರುವ ಪ್ರಧಾನಮಂತ್ರಿ ಕಚೇರಿ ಮೂಲಗಳು ಖುದ್ದು ಈ ಬಗ್ಗೆ ಅಧಿಕಾರಿಗಳ ಜತೆ ಮೋದಿ ಸಂಪರ್ಕದಲ್ಲಿದ್ದಾರೆ ಹಾಗೂ ಬಿಕ್ಕಟ್ಟು ಇತ್ಯರ್ಥದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ತೀರಾ ಬಿಕ್ಕಟ್ಟು ಎದುರಾದರೆ ಸಾರ್ವಜನಿಕ ವಲಯದ ಕಂಪನಿಗಳ ಲಾಭವನ್ನು ಬಳಸಿಕೊಂಡು ಬಿಕ್ಕಟ್ಟು ಸರಿದೂಗಿಸುವ ಇರಾದೆ ಹೊಂದಿದ್ದಾರೆ ಎಂದು ಹೇಳಿವೆ.
ಅಮೆರಿಕದ ಮೇಲೆ ಪ್ರತೀಕಾರವಿಲ್ಲ: ಭಾರತ
ನವದೆಹಲಿ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಸ್ತುಗಳ ಆಮದಿನ ಮೇಲೆ ಶೇ.26 ರಷ್ಟು ಪ್ರತಿಸುಂಕ ವಿಧಿಸಿದ್ದಕ್ಕೆ ಭಾರತ ಪ್ರತೀಕಾರ ತೀರಿಸಿಕೊಳ್ಳಲು ಯೋಜಿಸಿಲ್ಲ’ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರ ಬದಲು, ‘ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ನಡೆಯುತ್ತಿದ್ದು, ಅದರತ್ತ ಗಮನ ಹರಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
‘ವಾಷಿಂಗ್ಟನ್ ಜೊತೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಆರಂಭಿಸಿದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದು ಭಾರತಕ್ಕೆ ಅನುಕೂಲ ತರಲಿದೆ. ಹೀಗಾಗಿ ಈ ಹಂತದಲ್ಲಿ ಭಾರತವು ಅಮೆರಿಕ ವಸ್ತುಗಳ ಮೇಲೆ ಇನ್ನಷ್ಟು ತೆರಿಗೆ ಹೇರುವ ಚಿಂತನೆ ಮಾಡುವುದಿಲ್ಲ’ ಎಂದು ಅಧಿಕಾರಿ ಹೇಳಿದ್ದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ, ‘ಅಮೆರಿಕದ ಹೆಚ್ಚಿನ ಸುಂಕಗಳಿಂದ ಹಾನಿಗೊಳಗಾದ ದೇಶಗಳೆಂದರೆ ಚೀನಾ, ವಿಯೆಟ್ನಾಂ ಮತ್ತು ಇಂಡೋನೇಷ್ಯಾ. ಅವುಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಾನದಲ್ಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.ಟ್ರಂಪ್ ಘೋಷಣೆ ಮಾಡಿದ್ದ ಪ್ರತಿತೆರಿಗೆ ಏ.9ರಿಂದ ಜಾರಿಗೆ ಬರಲಿದೆ.