ರಿಯಾದ್‌: ಸೌದಿ ಅರೇಬಿಯಾದ ಮೇಲೆ ಭಾನುವಾರ ಇರಾನ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಓರ್ವ ಭಾರತೀಯ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ರಾಜಧಾನಿ ರಿಯಾದ್‌ನಿಂದ 80 ಕಿ.ಮೀ ದೂರದ ಅಲ್ ಖರ್ಜ್‌ ಪ್ರದೇಶದ ಜನವಸತಿ ಪ್ರದೇಶವೊಂದರ ಮೇಲೆ ನಡೆದ ದಾಳಿ ವೇಳೆ ಓರ್ವ ಭಾರತೀಯ, ಓರ್ವ ಬಾಂಗ್ಲಾದೇಶಿ ನಾಗರಿಕರು ಸಾವನ್ನಪ್ಪಿದ್ದಾರೆ. ಇತರೆ 12 ಬಾಂಗ್ಲಾದೇಶಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಇದರೊಂದಿಗೆ ಮಧ್ಯಪ್ರಾಚ್ಯಕ್ಕೆ ಯುದ್ಧಕ್ಕೆ ಬಲಿಯಾದ ಭಾರತೀಯರ ಸಂಖ್ಯೆ 4ಕ್ಕ ಏರಿದಂತಾಗಿದೆ. ಇದಕ್ಕೂ ಮೊದಲು ಹೋರ್ಮುಜ್‌ ಜಲಸಂಧಿ ಬಳಿ ತೈಲ ಹಡಗಿನ ಮೇಲೆ ಇರಾನ್‌ ನಡೆಸಿದ ದಾಳಿಗೆ ಮೂವರು ಭಾರತೀಯ ನಾವಿಕರ ಬಲಿಯಾಗಿದ್ದರು.

==

ದಾಳಿಗೂ ಮುನ್ನ ಇರಾನ್‌


ನೌಕೆ ಸಿಬ್ಬಂದಿಗೆ 2 ಬಾರಿ

ಎಚ್ಚರಿಸಿತ್ತಂತೆ ಅಮೆರಿಕ

ನವದೆಹಲಿ: ಹಿಂದೂಮಹಾಸಾಗರದಲ್ಲಿ ಇರಾನ್‌ನ ಐರಿಸ್‌ ಡೆನಾ ನೌಕೆ ದಾಳಿಗೂ ಮುನ್ನ ಅಮೆರಿಕವು ನೌಕೆ ಬಿಟ್ಟು ಹೋಗುವಂತೆ ಸಿಬ್ಬಂದಿಗೆ ಎರಡು ಬಾರಿ ಎಚ್ಚರಿಸಿತ್ತು ಎಂಬ ಸಂಗತಿ ಹೊರ ಬಿದ್ದಿದೆ. ಮಾಧ್ಯಮಗಳ ವರದಿ ಅನ್ವಯ, ದಾಳಿಗೊಳಗಾದ ನೌಕೆಯ ನಾವಿಕನೊಬ್ಬ ಸಾವಿಗೂ ಮುನ್ನ ತನ್ನ ಮನೆಗೆ ಕರೆ ಮಾಡಿ ‘ಅಮೆರಿಕದ ಪಡೆಗಳು ಯುದ್ಧನೌಕೆಯನ್ನು ತ್ಯಜಿಸುವಂತೆ ಆದೇಶಿಸಿದೆ. ಆದರೆ ಕಮಾಂಡರ್‌ ಇದಕ್ಕೆ ಅನುಮತಿಸಲು ನಿರಾಕರಿಸಿದ್ದಾರೆ. ಈ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆಯಿತು ಎಂಬುದಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಅಮೆರಿಕ ಯಾವುದೇ ಎಚ್ಚರಿಕೆ ನೀಡದೆ ತಮ್ಮ ನೌಕಾ ಹಡಗಿನ ಮೇಲೆ ದಾಳಿ ನಡೆಸಿತ್ತು ಎನ್ನುವ ಇರಾನ್‌ ಆರೋಪಕ್ಕೆ ವಿರುದ್ಧವಾಗಿದೆ.

==

ಯುದ್ಧ ಗೆದ್ದಾಯ್ತು, ನಿಮ್ಮ 2 ನೌಕೆ

ಬೇಡ: ಬ್ರಿಟನ್‌ಗೆ ಟ್ರಂಪ್‌ ಟಾಂಗ್‌

ವಾಷಿಂಗ್ಟನ್‌: ‘ಇರಾನ್‌ ವಿರುದ್ಧದ ಯುದ್ಧದಲ್ಲಿ ನಮಗೆ ಬ್ರಿಟನ್‌ ಸಹಾಯ ಬೇಕಿಲ್ಲ. ಈಗಾಗಲೇ ಯುದ್ಧವನ್ನು ಗೆದ್ದ ನಂತರ ಯಾರೂ ಕೈಜೋಡಿಸುವ ಅಗತ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬ್ರಿಟನ್‌ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.ಅಮೆರಿಕಕ್ಕೆ ನೆರವು ನೀಡಲು ತಮ್ಮ ಯುದ್ಧನೌಕೆ ಸರ್ವಸನ್ನದ್ಧವಾಗಿದೆ ಎಂದು ಶನಿವಾರ ಬ್ರಿಟನ್‌ ರಕ್ಷಣಾ ಸಚಿವಾಲಯ ಹೇಳಿತ್ತು. ಇದನ್ನು ತಿರಸ್ಕರಿಸಿರುವ ಟ್ರಂಪ್‌, ‘ಒಂದು ಕಾಲದಲ್ಲಿ ನಮಗೆ ಎಲ್ಲರಿಗಿಂತ ಶ್ರೇಷ್ಠ ಮಿತ್ರನಾಗಿದ್ದ ಬ್ರಿಟನ್‌, ಮಧ್ಯಪ್ರಾಚ್ಯಕ್ಕೆ 2 ಯುದ್ಧವಾಹಕ ನೌಕೆಗಳನ್ನು ಕಳಿಸಲು ಚಿಂತನೆ ನಡೆಸುತ್ತಿದೆ. ಆದರೆ ಇನ್ನು ನಮಗೆ ಅವುಗಳ ಅಗತ್ಯವಿಲ್ಲ. ಯುದ್ಧ ಗೆದ್ದ ನಂತರ ಕೈಜೋಡಿಸುವ ಜನ ನಮಗೆ ಬೇಕಿಲ್ಲ’ ಎಂದು ಟ್ರುತ್‌ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

==

ಖಮೇನಿ ಸ್ಥಾನಕ್ಕೆ ಹೊಸ

ನಾಯಕ; ಅವರನ್ನೂ

ಹತ್ಯೆ ಮಾಡ್ತೀವಿ: ಇಸ್ರೇಲ್‌

ಟೆಹ್ರಾನ್‌: ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ತೀವ್ರಗತಿಯಲ್ಲಿ ಮುಂದುವರಿಯುತ್ತಿರುವ ನಡುವೆಯೇ, ಇರಾನ್‌ನ ಹೊಸ ಸರ್ವೋಚ್ಚ ನಾಯಕನ ಆಯ್ಕೆ ಅಂತಿಮಗೊಂಡಿದ್ದು, ಹಿರಿಯ ಧಾರ್ಮಿಕ ನಾಯಕರು ಶೀಘ್ರದಲ್ಲೇ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.ಇಸ್ರೇಲ್‌ ದಾಳಿಗೆ ಅಯತೊಲ್ಲ ಖಮೇನಿ ಸಾವಿಗೀಡಾದ ಬಳಿಕ ಇರಾನ್‌ನ ಸರ್ವೋಚ್ಚ ನಾಯಕನ ಹುದ್ದೆ ಖಾಲಿಯಿದೆ. ಆದರೆ ಯಾರನ್ನೇ ಆ ಸ್ಥಾನದಲ್ಲಿ ಕುಳ್ಳಿಸಿದರೂ ಹತ್ಯೆ ಮಾಡುವುದಾಗಿ ಇಸ್ರೇಲ್‌ ಎಚ್ಚರಿಕೆ ಕೊಟ್ಟಿದೆ. ಈ ಮಧ್ಯೆ 88 ಹಿರಿಯ ಧಾರ್ಮಿಕ ಮುಖಂಡರ ತಂಡ ಒಬ್ಬನ ಹೆಸರನ್ನು ಅಂತಿಮಗೊಳಿಸಿದೆ. ಈ ತಂಡದ ಉನ್ನತ ನಾಯಕ ಮೊಹಮ್ಮದ್‌ ಮೆಹ್ದಿ ಮಿರ್ಭಗೇರಿ ಸದ್ಯದಲ್ಲೇ ಹೊಸ ನಾಯಕನನ್ನು ನೇಮಿಸಲಿದ್ದಾರೆ ಎನ್ನಲಾಗಿದೆ.