ಸಾರಾಂಶ
ದುಬೈ: ಇಸ್ರೇಲ್ ಇರಾನ್ ಯುದ್ಧ ಶುರುವಾದಾಗಿನಿಂದ ಭೂಗತವಾಗಿ ಅಡಗಿಕೊಂಡಿದ್ದ ಇರಾನ್ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿ, ನಮ್ಮ ಮೇಲೆ ಮತ್ತೇನಾದರೂ ಅಮೆರಿಕ ದಾಳಿ ನಡೆಸಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಯಹೂದಿ ಆಡಳಿತ ಅಂತ್ಯವಾಗುವ ಆತಂಕದಿಂದಷ್ಟೇ ಅಮೆರಿಕ ಯುದ್ಧಕ್ಕೆ ಮಧ್ಯಪ್ರವೇಶ ಮಾಡಿತ್ತು ಎಂದು ಹೇಳಿದ್ದಾರೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಖಮೇನಿ, ‘ಕತಾರ್ನಲ್ಲಿ ಅಮೆರಿಕ ನೆಲೆಗಳ ಮೇಲಿನ ನಮ್ಮ ದಾಳಿ ನಾವು ಏನು ಬೇಕಾದರೂ ಮಾಡಬಲ್ಲೆವು, ಅಮೆರಿಕ ನಮ್ಮ ದಾಳಿ ವ್ಯಾಪ್ತಿಯಿಂದ ಹೊರಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಈ ದಾಳಿಯ ಮೂಲಕ ನಾವು ಅಮೆರಿಕಕ್ಕೆ ಕಪಾಳಮೋಕ್ಷ ಮಾಡಿದ್ದೇವೆ. ಮುಂದೇನಾದರೂ ಮತ್ತೆ ಅಮೆರಿಕ ನಮ್ಮ ಮೇಲೆ ದಾಳಿ ನಡೆಸಲು ಮುಂದಾದರೆ ನಾವು ಸೂಕ್ತ ತಿರುಗೇಟು ನೀಡಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ದಾಳಿಯ ನಮ್ಮ ಪರಮಾಣು ಶಕ್ತಿ ತಡೆಯಬಹುದೆಂಬ ಅಮೆರಿಕದ ಊಹೆ ವಿಫಲವಾಗಿದೆ. ದಾಳಿಯಿಂದ ಯಾವುದೇ ಮಹತ್ವ ಉದ್ದೇಶ ಸಾಧಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ಖಮೇನಿ ಹೇಳಿದ್ದಾರೆ.
ಉಧಂಪುರ ಅರಣ್ಯದಲ್ಲಿ ಒಬ್ಬ ಉಗ್ರನ ಹತ್ಯೆ: ಮೂವರ ಬಂಧನಕ್ಕೆ ಸೇನೆ ಬಲೆ
ಜಮ್ಮು: ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಆ ಪೈಕಿ ಒಬ್ಬನನ್ನು ಹತ್ಯೆ ಮಾಡಲಾಗಿದೆ. ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಳೆ ಹಾಗೂ ಹಿಮದ ನಡುವೆಯೂ ಜಂಟಿಯಾಗಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ‘ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಸಂತ್ಗಢದ ಬಿಹಾಲಿ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿವೆ. ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಇನ್ನು ಮೂವರ ಸೆರೆಗೆ ಬಲೆ ಬೀಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1000 ಅಂಕ ಏರಿದ ಸೆನ್ಸೆಕ್ಸ್ 8 ತಿಂಗಳ ಗರಿಷ್ಠ ಮಟ್ಟಕ್ಕೆ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ 1000 ಅಂಕಗಳ ಭರ್ಜರಿ ಏರಿಕೆ ಕಂಡು 83755 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಕಳೆದ 8 ತಿಂಗಳಲ್ಲೇ ಸೆನ್ಸೆಕ್ಸ್ನ ಗರಿಷ್ಠ ಮಟ್ಟವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 304 ಅಂಕಗಳ ಏರಿಕೆ ಕಂಡು 25549 ಅಂಕದಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್ ಸತತ ಮೂರು ದಿನಗಳಲ್ಲಿ ಒಟ್ಟು 1850 ಅಂಕಗಳ ಏರಿಕೆ ಕಂಡಿದ್ದು, ಹೂಡಿಕೆದಾರರ ಸಂಪತ್ತಿನಲ್ಲಿ 9.50 ಲಕ್ಷ ಕೋಟಿ ರುನಷ್ಟು ಏರಿಕೆಯಾಗಿದೆ. ಇಸ್ರೇಲ್- ಇರಾನ್ ಸಂಧಾನ, ಜಾಗತಿಕ ಷೇರುಪೇಟೆಗಳ ಚೇತರಿಕೆ, ಡಾಲರ್ ಎದುರು ರುಪಾಯಿ ಮೌಲ್ಯ, ಚೇತರಿಕೆ, ವಿದೇಶಿ ಹೂಡಿಕೆದಾರರ ಹೂಡಿಕೆ ಹೆಚ್ಚಳ, ದೇಶಿಯ ಉದ್ಯಮಗಳ ಉತ್ತಮ ಸಾಧನೆ ಷೇರುಪೇಟೆ ಏರಿಕೆಗೆ ಕಾರಣವಾಗಿದೆ.
345 ಮಾನ್ಯತೆ ಹೊಂದಿರದ ಪಕ್ಷಗಳು ಪಟ್ಟಿಯಿಂದ ಔಟ್
ನವದೆಹಲಿ: ಭಾರತದ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡು ಕಳೆದ 6 ವರ್ಷದಿಂದ ಯಾವುದೇ ಚುನಾವಣೆಗೆ ಸ್ಪರ್ಧಿಸದ 345 ರಾಜಕೀಯ ಪಕ್ಷಗಳನ್ನು ಕೇಂದ್ರ ಚುನಾವಣಾ ಆಯೋಗ ಪಟ್ಟಿಯಿಂದ ಕೈಬಿಟ್ಟಿದೆ. ಈ ಪಕ್ಷಗಳು ಹೆಸರು ನೋಂದಣಿ ಮಾಡಿದ್ದರು ಮಾನ್ಯತೆ ಹೊಂದಿದ ಪಕ್ಷ ಎಂಬ ಅರ್ಹತೆ ಪಡೆಯಲು ಅಗತ್ಯವಾದ ಮತಗಳನ್ನು ಯಾವುದೇ ಚುನಾವಣೆಯಲ್ಲಿ ಪಡೆದಿರಲಿಲ್ಲ. ಜೊತೆಗೆ ಕಳೆದ 6 ವರ್ಷದಿಂದ ಯಾವುದೇ ಚುನಾವಣೆಗೂ ಸ್ಪರ್ಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ಅವುಗಳನ್ನು ಪಟ್ಟಿಯಿಂದ ಕೈಬಿಡುವ ನಿರ್ಧಾರ ಕೈಗೊಂಡಿದೆ. ಆಯೋಗದಲ್ಲಿ ಹೆಸರು ನೋಂದಣಿ ಮಾಡಿರುವ 2800 ಪಕ್ಷಗಳ ಪೈಕಿ ಹಲವು ಪಕ್ಷಗಳು ಅರ್ಹತೆಯನ್ನು ಪೂರೈಸಿಲ್ಲ.